ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಅಮೃತಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮಕ್ಕೆ ಶನಿವಾರ ರಾಜ್ಯದ 75 ಸ್ಥಳಗಳಲ್ಲಿ ಏಕಕಾಲಕ್ಕೆ ಚಾಲನೆ ದೊರೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಅಭಿಯಾನ ಉದ್ಘಾಟಿಸಲಿದ್ದಾರೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿದುರಾಶ್ವತ್ಥದಲ್ಲಿ ಮತ್ತು ಕನ್ನಡ- ಸಂಸ್ಕೃತಿ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಯಾದಗಿರಿಯ ಸುರಪುರದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.
ಹೋರಾಟದ ನೆಲದಲ್ಲಿ ಒಂದು ದಿನ :
ಜುಲೈ 1ರಿಂದ ರಿಂದ 10ರ ವರೆಗೆ ಹೋರಾಟದ ನೆಲದಲ್ಲಿ ಒಂದು ದಿನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ರಾಜ್ಯದ ಆಯ್ದ 15 ಸ್ಥಳಗಳಲ್ಲಿ ಕಾರ್ಯಕ್ರಮ ಜರಗಲಿದೆ. ಮೂರನೇ ಹಂತದಲ್ಲಿ ಆಗಸ್ಟ್ 1ರಿಂದ 8ರವರೆಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ರಥಯಾತ್ರೆ ನಡೆಯಲಿದೆ. ರಾಜ್ಯದ 31 ಜಿಲ್ಲೆಗಳನ್ನು ಹಾದು ಈ ರಥಯಾತ್ರೆ ಆ. 9ರಂದು ಬೆಂಗಳೂರಿಗೆ ತಲುಪಲಿದೆ. ವಿವಿಧ ರಂಗಾಯಣಗಳಿಂದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ನಾಟಕಗಳನ್ನು ಆಯಾ ಜಿಲ್ಲಾವಾರು ರಚನೆ ಮಾಡಲು ಸೂಚನೆ ನೀಡಲಾಗಿದೆ.
ಆಗಸ್ಟ್ 9, 10, 11 ರಂದು ಅಮೃತ ಮಹೋತ್ಸವದ ಸಮಾರೋಪ ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ 10ರಂದು ರಾಜ್ಯಾದ್ಯಂತ ಎಲ್ಲರ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ವಿನೂತನ ಚಿಂತನೆ ನಡೆಸಲಾಗಿದ್ದು, ಪೂರ್ವ ತಯಾರಿ ಮಾಡಲು ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.