ಹೊಸದಿಗಂತ ವರದಿ,ತುಮಕೂರು:
ಜಿಲ್ಲೆಯ ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯಸರ್ಕಾರ ಸ್ಪಂದಿಸಲಿದ್ದು ಶೀಘ್ರವೇ ನಫೆಡ್ ಪ್ರಾರಂಭಿಸಿ ರೈತರಿಂದ ಬೆಂಬಲ ಬೆಲೆ ಜೊತೆಗೆ ರಾಜ್ಯಸರ್ಕಾರದ ಪ್ರೋತ್ಸಾಹಧನ ನೀಡಿ ಕೊಂಡುಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ಹಲವಾರು ವರ್ಷಗಳಿಂದ ಕೊಬ್ಬರಿ ಬೆಲೆ 15 ಸಾವಿರದ ಅಸುಪಾಸಿನಲ್ಲಿದ್ದು, ಕಳೆದ 3 ತಿಂಗಳಿನಿಂದ ಗಣನೀಯವಾಗಿ ಕುಸಿತ ಕಂಡು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೇ ಕಳೆದ ಎರಡು ವರ್ಷದಲ್ಲಿನ ಹವಮಾನ ವೈಪರಿತ್ಯದಿಂದಾಗಿ ಕೊಬ್ಬರಿ ಸರಿಯಾದ ಸಮಯಕ್ಕೆ ಬಾರದೇ ಹಸಿ ಅಂಶ ಉಳಿದುಕೊಂಡು ರೈತರಿಗೆ ನಷ್ಟ ಉಂಟಾಗಿದೆ. ಇದೀಗ 10 ಸಾವಿರದ ಆಂಚಿನಲ್ಲಿ ಬಂದಿರುವುದು ವಿಷಾದನೀಯ ಸಂಗತಿ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಶೀಘ್ರವೇ ನಫೆಡ್ ಪ್ರಾರಂಭಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಲಿದೆ. ಸರ್ಕಾರದ ಕೆಲ ಅಧಿಕಾರಿಗಳು, ಆರ್ಥಿಕ ತಜ್ಞರುಗಳೊಂದಿಗೆ ಸಮಾಲೋಚನೆ ನಡೆಸಿ ಉಂಡೆ ಕೊಬ್ಬರಿ ಬೆಂಬಲ ಬೆಲೆ 11,750 ರೂ ಜೊತೆಗೆ ರಾಜ್ಯಸರ್ಕಾರದ ಪ್ರೋತ್ಸಾಹಧನವನ್ನು ಕೊಡಿಸಲಾಗುವುದು. ಕಳೆದ ಹಲವು ವರ್ಷಗಳಿಂದಲೂ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿಯೇ ರೈತರಿಗೆ ಬೆಂಬಲ ಬೆಲೆ ಏರಿಕೆ ಮಾಡಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಆಲೋಚನೆ ಮಾಡಲಾಗುವುದು ಎಂದರು.