– ವೆಂಕಟೇಶ ದೇಸಾಯಿ
ಸ್ವಾತಂತ್ರ್ಯೋತ್ಸವ ಸಂಭ್ರಮ, ಅಮೃತ ಮಹೋತ್ಸವ ಆಚರಣೆಗೆ ವಿಜಯನಗರದಲ್ಲಿ ಸಕಲ ಸಿದ್ದತೆಗಳು ಭರದಿಂದ ಸಾಗಿವೆ. ಹಂಪಿಯ ವಿವಿಧ ಸ್ಮಾರಕಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ವಿಶ್ವಪ್ರಸಿದ್ಧ ಹಂಪಿಯ ಸಾಲು ಮಂಟಪ, ವಿರುಪಾಕ್ಷೇಶ್ವರ ದೇಗುಲದ ಮುಖ್ಯದ್ವಾರದ ಗೋಪುರ, ಸೇರಿದಂತೆ ಸ್ಮಾರಕಗಳು ಬಣ್ಣಗಳ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಪ್ರಸಕ್ತ ವರ್ಷ ಭರ್ತಿಯಾಗಿದ್ದು, 1.50 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದು, ಹಂಪಿಯ ಈ ಸೊಬಗು ಆನಂದಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ವಿಜಯನಗರ ಕ್ಷೇತ್ರದ ಶಾಸಕ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿಶೇಷ ಕಾಳಜಿ, ಆಸಕ್ತಿಯಿಂದ ನೂತನ ಜಿಲ್ಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಣೆಗೆ ಸಿದ್ದತೆ ನಡೆಸಿದ್ದಾರೆ. ಹಂಪಿಯ ಸ್ಮಾರಕಗಳಿಗೆ ಹೊಸ ಸ್ಪರ್ಶ ನೀಡುವ ಮೂಲಕ ಪ್ರವಾಸಿಗರ ಆಕರ್ಷಣೆಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಸಂಜೆ ವೇಳೆ ಹಂಪಿಗೆ ತೆರಳಿದರೇ ಅದರ ಆನಂದವೇ ಬೇರೆ. ಇದರ ಜೊತೆಗೆ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಮೊಟ್ಟ ಮೊದಲ ಬಾರಿಗೆ ಧ್ವಜಾರೊಹಣ ನೆರವೇರಿಸಲು ಸಜ್ಜಾಗಿದ್ದಾರೆ.
ದೇಶದ ಅತಿ ಎತ್ತರದ ಧ್ವಜಸ್ತಂಭ:
ವಿಜಯನಗರ ನೂತನ ಜಿಲ್ಲೆ ಸ್ಥಾಪನೆ ರೂವಾರಿ ಆನಂದ್ ಸಿಂಗ್ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೊಸ ಇತಿಹಾಸ ಸೃಷ್ಟಿಗೆ ಮುಂದಾಗಿದ್ದಾರೆ. ಅಮೃತ ಮಹೋತ್ಸವ ಹಿನ್ನೆಲೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭ ಅಂದರೆ 6 ಕೋಟಿ ರೂ.ವೆಚ್ಚದ ಕಾಮಗಾರಿ ಪ್ರಾರಂಭವಾಗಿದ್ದು, ಸಿದ್ದತೆ ಭರದಿಂದ ಸಾಗಿದೆ. ಸಚಿವ ಆನಂದ್ ಸಿಂಗ್ ನೂತನ ಜಿಲ್ಲೆಯ, ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಆ.15 ರಂದು ಧ್ವಜಾರೋಹಣ ಮಾಡಲಿದ್ದಾರೆ. ತುಕ್ಕು ಹಿಡಿಯಲಾರದ, ಪುಣೆಯಿಂದ ತರಿಸಿದ ಕಬ್ಬಿಣದ ಸಲಕರಣೆಗಳ ಮೂಲಕ ಧ್ವಜಸ್ತಂಭ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಈಗಾಗಲೇ ನುರಿತ ತಜ್ಞರು ಹೊಸಪೇಟೆಗೆ ಆಗಮಿಸಿದ್ದು, ಆ.14 ರೊಳಗೆ ಎಲ್ಲ ಸಿದ್ಧತೆ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಹೊಸಪೇಟೆ ನಗರದ ಪುನೀತ್ರಾಜ್ ಕುಮಾರ್ ವೃತ್ತದ ಬಳಿ 150 ಅಡಿ ಎತ್ತರದ ಧ್ವಜಸ್ತಂಭವಿದೆ. ಜೋಳದರಾಶಿ ಗುಡ್ಡದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭವಿದೆ. ನಗರದ ಬಿಜೆಪಿ ಜಿಲ್ಲಾ ಕಚೇರಿ, ಸಚಿವ ಆನಂದ್ ಸಿಂಗ್ ಅವರ ನಿವಾಸ ಸೇರಿ ವಿವಿಧೆಡೆ 100 ಅಡಿ ಎತ್ತರದ ಧ್ವಜಸ್ತಂಭವಿದೆ. ಇದರ ಜೊತೆಗೆ ನಗರದ ರೈಲ್ವೆ ನಿಲ್ದಾಣದ ಬಳಿ 70 ಅಡಿ, ಜಿಲ್ಲಾ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜಾರೋಹಣ ದೇಶದ ಗಮನ ಸೆಳೆಯಲಿದೆ.
“ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆಯಿಂದ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 6 ಕೋಟಿ ರೂ.ವೆಚ್ಚದ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿದೆ. ವಿಶ್ವದ ಅತಿದೊಡ್ಡ ಒಂಬತ್ತನೇ ಧ್ವಜಸ್ತಂಭ ಇದಾಗಲಿದೆ. ಈ ಅವಧಿಯಲ್ಲಿ ವಿಜಯನಗರ ನೂತನ ಜಿಲ್ಲೆಯ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ.”- ಆನಂದ್ ಸಿಂಗ್- ಪರಿಸರ, ಜೀವಶಾಸ್ತ್ರ, ಪ್ರವಾಸೋದ್ಯಮ ಸಚಿವರು.