ಹೊಸದಿಗಂತ ವರದಿ,ಅಂಕೋಲಾ:
ಅನಾದಿಕಾಲದಿಂದ ಅರಣ್ಯ ಭೂಮಿ ಮೇಲೆ ಅವಲಂಬಿತವಾಗಿರುವ ತಾಲೂಕಿನ ಹಟ್ಟಿಕೇರಿಯ ಶೇವೆಗುಳಿ ಗ್ರಾಮದ ಬುಡಕಟ್ಟು ಕುಣಬಿ ಸಮಾಜದ ಬೆಲ್ಲ ಮತ್ತು ಸಾತಾ ಕುಣಬಿ ಅತಿಕ್ರಮಣ ಭೂಮಿ ಸಾಗುವಳಿಗೆ ಆತಂಕ ಉಂಟುಮಾಡಿ ಬೆಳೆನಾಶ ಮಾಡುವ ಮೂಲಕ ಅರಣ್ಯ ಸಿಬ್ಬಂದಿಗಳು ಕಾನೂನು ಬಾಹಿರ ಕೃತ್ಯ ಎಸೆಗಿದ್ದಾರೆ ಎಂದು ತಾಲೂಕ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ರಾಜೇಶ ಮಿತ್ರ ನಾಯ್ಕ ತೆಂಕಣಕೇರಿ ಆರೋಪ ಮಾಡಿದ್ದಾರೆ.
ಈ ಕುರಿತಾಗಿ ಹೇಳಿಕೆ ನೀಡಿರುವ ಅವರು, ಕಳೆದ ಮೂರು-ನಾಲ್ಕು ದಶಕದಿಂದ ಅರಣ್ಯ ಭೂಮಿ ಅತಿಕ್ರಮಿಸಿ ಸಾಗುವಳಿ ಮಾಡಿಕೊಂಡು ಜೀವಿಸುತ್ತಿದ್ದಾರೆ. ಅರಣ್ಯ ಭೂಮಿ ಮಂಜೂರಿಗೆ ಸಂಬಂಧ ಪಟ್ಟಂತೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಜಿಪಿಎಸ್ ಜರುಗಿರುವಂತಹ ಅತಿಕ್ರಮಣ ಕ್ಷೇತ್ರದಲ್ಲಿ ಏಕಾಏಕಿಯಾಗಿ ಗಿಡ-ಮರ ಕಡಿದು ಅಪಾರ ಪ್ರಮಾಣದಲ್ಲಿ ಅತಿಕ್ರಮಣದಾರರಿಗೆ ನಷ್ಟ ಉಂಟುಮಾಡಿದ್ದಾರೆ. ಈ ದುಷ್ಕೃತ್ಯ ಎಸೆಗಿದ ಅರಣ್ಯ ಸಿಬ್ಬಂದಿಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳು ದಿನನಿತ್ಯ ಅರಣ್ಯವಾಸಿಗಳ ಮೇಲೆ ದೌರ್ಜನ್ಯ, ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವ ಪ್ರವೃತ್ತಿ ಕಡಿಮೆಯಾಗಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ. ವಿಜಯ ಪಿಳ್ಳೆ, ಹೊಸಗದ್ದೆ ತಾಲೂಕ ಅರಣ್ಯ ಅತಿಕ್ರಮಣದಾರರ ಸಂಚಾಲಕ ಗಣೇಶ ನಾಯ್ಕ ಉಪಸ್ಥಿತರಿದ್ದರು.