ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡು ಕಂಡ ಅಪರೂಪದ ಅನುಭವಿ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಪೂಜ್ಯರು ತೋರುತ್ತಿದ್ದ ನಿಷ್ಕಲ್ಮಶ ಪ್ರೀತಿ, ನಿರ್ಮಲ ಅಂತಃಕರಣ ಸರ್ವರಿಗೂ ಆದರ್ಶ. ಕಾಣುವ ಜಗವೆಲ್ಲವು ದೈವದ ಅಭಿವ್ಯಕ್ತಿಯೇ ಎಂದು ಅರಿತು ಬೋಧಿಸಿದವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿರವರು. ಜಗದ ಎಲ್ಲೆಡೆ ಸಂಚರಿಸಿ ಜ್ಞಾನದ ನುಡಿಗಳನ್ನು ಜಗದ ಜನರಿಗೆ ಬೋಧಿಸಿ, ಅಸಂಖ್ಯಾತ ಭಕ್ತರ ಮನಸ್ಸಿನ ತಮವನ್ನು ಕಳೆದರು. ತಮ್ಮನ್ನು ಆರಾಧಿಸುವ ಬಡವ ಬಲ್ಲಿದರ ನಡುವೆ ತಾವು ತಾವಾಗಿಯೇ ಇದ್ದು ನಿರಾಭಾರಿ ಸಂತರಾಗಿ ಬದುಕಿದರು ಎಂದು ಹೇಳಿದರು.
ನುಡಿದಂತೆ ನಡೆದು ತಮ್ಮ ನಡೆಗೂ ನುಡಿಗೂ ಅಂತರವಿರದಂತೆ ಬಾಳಿದ ನಿಜ ಸಂತರಾದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿರವರು ಇನ್ನಿಲ್ಲವಾದುದರಿಂದ ಆಧ್ಯಾತ್ಮಿಕ ಲೋಕಕ್ಕೆ ಭರಿಸಲಾರದ ನಷ್ಟವುಂಟಾಗಿದೆ. ಭಗವಂತನು ಪೂಜ್ಯರ ಅಗಲಿಕೆಯಿಂದ ದುಃಖ ತಪ್ತರಾಗಿರುವ ಭಕ್ತ ವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು, ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಆಶಿಸುತ್ತೇವೆ ಎಂದು ಹೇಳಿದರು.