ಹೊಸದಿಗಂತ ವರದಿ ಕಲಬುರಗಿ:
ಉದ್ಯಮ ಕ್ಷೇತ್ರದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ,ರಾಜ್ಯಕ್ಕೆ ಮತ್ತು ವೀರಶೈವ ಲಿಂಗಾಯತ ಸಮಾಜಕ್ಕೆ ಕೀರ್ತಿ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಪುತ್ರ ಭರತ್ ಬಸವರಾಜ ಬೊಮ್ಮಾಯಿ ಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಅಮರನಾಥ ಪಾಟೀಲ್ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,ಅಂತರಾಷ್ಟ್ರೀಯ ಟೈಟಾನ್ ಬಿಜಿನೆಸ್ ಆವಾಡ್೯ 2022ರನ್ನು ಬಾಚಿಕೊಂಡು,ಇಡೀ ದೇಶ ಹಾಗೂ ನಾಡಿಗೆ ಕೀರ್ತಿ ತಂದಿದ್ದಾರೆ. ಹೀಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ,ರಾಷ್ಟ್ರೀಯ ಕೈಗಾರಿಕಾ ಮತ್ತು ವಾಣಿಜ್ಯ ಸಮಿತಿ ಜಂಟಿಯಾಗಿ ಅಭಿನಂದನಾ ಸಮಾರಂಭವನ್ನು ಆಯೋಜಿಸಿದೆ ಎಂದರು.
ಜ.9 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಚೇಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶರಣಬಸಪ್ಪಾ ಅಪ್ಪಾ, ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ಟೇಷನ್ ಬಬಲಾದ್,ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು ಸೇರಿದಂತೆ ಶ್ರೀ ಮಹಾಂತೇಶ ಪಾಟೀಲ್, ಪ್ರಶಾಂತ್ ಮಾನಕರ್,ವಿಕ್ರಮ ಸಿದ್ದಾರೆಡ್ಡಿ,ಅಭಿಷೇಕ್ ಪಾಟೀಲ್, ಶಿವಕುಮಾರ್ ಮೆಟಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾ ಸಭಾ ಬಳಗದ ಎಂ.ಎಸ್.ಪಾಟೀಲ್ ನರಿಬೊಳ,ಶಿವಲಿಂಗ ಪಾಟೀಲ್ ಸಾವಳಗಿ,ಚಂದ್ರಶೇಖರ್ ಬಿಜಾಪುರೆ,ಲಿಂಗರಾಜ ಭಾವಿಕಟ್ಟಿ, ಲಕ್ಷ್ಮಿಕಾಂತ ಸ್ವಾದಿ,ಅಜಯ್ ಮದಗುಣಕಿ,ಅಭಿಜಿತ್ ಪಡಶೆಟ್ಟಿ ಇದ್ದರು.