ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸಿಸೋಡಿಯಾ ಮನೆಯ ಮೇಲೆ ಸಿಬಿಐ ದಾಳಿ ನಡೆಸಿ ಸತತ 15 ಗಂಟೆಗಳ ಶೋಧ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್ ಅವರು ಸಿಸೋಡಿಯಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಅಲ್ಕಾ ಲಂಬಾ ಮತ್ತು ಅಭಿಷೇಕ್ ದತ್ ಕೂಡ ಮನೀಶ್ ಸಿಸೋಡಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಕುಮಾರ್ ಅವರು ಶೆಲ್ ಕಂಪನಿಗಳಿಗೆ ಮದ್ಯದ ಪರವಾನಗಿಗಳನ್ನು ಅಕ್ರಮವಾಗಿ ವಿತರಿಸುವಲ್ಲಿ ಬಹುಕೋಟಿ ಹಗರಣ ನಡೆದಿರುವ ಕುರಿತು ಪಕ್ಷವು ಜೂನ್ನಲ್ಲಿ ಅಂದಿನ ದೆಹಲಿಯ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಅವರಿಗೆ ಪತ್ರ ಬರೆದಿದೆ ಎಂದು ಹೇಳಿದ್ದಾರೆ.
ಈ ನಡುವೆ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ದಾಳಿ ನಡೆದ ಬಳಿಕ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಸಿಬಿಐ ದಾಳಿಯ ಕೆಲವೇ ಗಂಟೆಗಳ ನಂತರ ಅಧಿಕಾರಿಗಳನ್ನು ಇಲಾಖೆಗಳ ನಡುವೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.