ಹೊಸ ದಿಗಂತ ವರದಿ , ಕಲಬುರಗಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಜನರ ಅಭಿವೃದ್ಧಿಯನ್ನೇ ಮರೆತಿದೆ. ನಗರದಲ್ಲಿನ ಕಾಂಗ್ರೆಸ್ನ ಉತ್ತರ ಕ್ಷೇತ್ರದ ಮತ್ತು ದಕ್ಷಿಣ ಕ್ಷೇತ್ರದ ಶಾಸಕರು ಅಭಿವೃದ್ಧಿಯನ್ನು ಮರೆತ್ತಿದ್ದಾರೆ ಎಂದು ಬಿಜೆಪಿ ಮಹಾನಗರ ಘಟಕದ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಆರೋಪಿಸಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರ ಮನೆಗೆ, ಉತ್ತರ ಕ್ಷೇತ್ರದ ಶಾಸಕಿಯ ಮನೆಗೆ ತೆರಳಿ, ಬಿಜೆಪಿಯಿಂದ ಹಮ್ಮಿಕೊಂಡಿದ್ದ ಮತದಾರರಿಗೆ ಉತ್ತರಿಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಎಂಟು ತಿಂಗಳಿಂದ ಯಾವುದೇ ಅಭಿವೃದ್ಧಿ ಮಾಡದೇ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದು, ಎಂಟು ತಿಂಗಳಲ್ಲಿ ಏನು ಮಾಡಿದ್ದೀರಿ? ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ ಎಂದು ಆಗ್ರಹಿಸಿದರು. ಅಭಿವೃದ್ಧಿಯ ಕುರಿತು ಉತ್ತರ ನೀಡಿ, ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೆವೂರ, ಮಹಾನಗರ ಪಾಲಿಕೆಯ ಮಹಾ ಪೌರ ವಿಶಾಲ ದರ್ಗಿ, ಉಪ ಮಹಾ ಪೌರ ಶಿವಾನಂದ ಪಿಸ್ತಿ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಪ್ರದಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.