ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜನತೆ ಬಿಪಿಎಲ್ಗೆ (BPL Card) ನತ್ತ ಮುಖಮಾಡಿದ್ದು, ಮೇ 14 ರಿಂದ 20ರವರೆಗೆ 6 ದಿನಗಳಲ್ಲಿ ಬರೋಬ್ಬರಿ 78 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಇದರ ಹಿಂದಿನ ಮುಖ್ಯ ಕಾರಣ ಗ್ಯಾರಂಟಿ ಯೋಜನೆ. ಹೌದು ಮುಂದಿನ ತಿಂಗಳು ಗ್ಯಾರಂಟಿ ಜಾರಿಯಾಗಲಿರುವ ಲಕ್ಷಣಗಳು ಕಾಣಿಸುತ್ತಿದ್ದಂತೆ ಜನರು ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಒಟ್ಟು ಆರು ತಿಂಗಳಲ್ಲಿ 2 ಲಕ್ಷದ 88 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಈಗ ಮತ್ತೆ ದಿಢೀರ್ ಏರಿಕೆಯಾಗಿದೆ. ಬಿಪಿಎಲ್ ಕಾರ್ಡ್ ಮಿತಿಯನ್ನು ಕರ್ನಾಟಕ ದಾಟಿದೆ. ಕೇಂದ್ರ ಸರ್ಕಾರದ (Central Government) ಸಬ್ಸಿಡಿ ಪಡೆಯಲು ಈ ಮಿತಿ ಬಹಳ ಮುಖ್ಯವಾಗಿದೆ.
ರಾಜ್ಯದಲ್ಲಿ 4.01 ಕೋಟಿ ಜನರಿಗೆ ಮಾತ್ರ ಬಿಪಿಎಲ್ ಸೌಲಭ್ಯ ಕೊಡಬಹುದು. ಆದರೆ ಈಗಾಗಲೇ 30 ಲಕ್ಷ ಹೆಚ್ಚುವರಿ ಬಿಪಿಎಲ್ ಕಾರ್ಡ್ಗಳಿವೆ. ಅದ್ದರಿಂದ ಹೊಸದಾಗಿ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತದೆ. ಅರ್ಹತೆಗಳ ಆಧಾರದಲ್ಲಿ ಜೂನ್ ಮೊದಲ ವಾರ ಹೊಸ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದು ನಾಗರಿಕ ಸರಬರಾಜು ಇಲಾಖೆ (Food, Civil Supplies and Consumer Affairs Department) ಅಧಿಕಾರಿ ಜ್ಞಾನೇಂದ್ರ ತಿಳಿಸಿದ್ದಾರೆ.
YouTube video player
ಒಂದೇ ವರ್ಷದಲ್ಲಿ 3 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲಾಗಿದ್ದು, ಬರೋಬ್ಬರಿ 13 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡರೆ ಇದುವರೆಗೆ ಪಡೆದ ರೇಷನ್ ಅಕ್ಕಿ ಲೆಕ್ಕದಲ್ಲಿ ದಂಡ ವಸೂಲಿ ಮಾಡಲಾಗುತ್ತದೆ. ಕೆಜಿಗೆ 38 ರೂ.ನಂತೆ ಲೆಕ್ಕ ಹಾಕಿ ದಂಡ ವಸೂಲಿ ಮಾಡಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ರದ್ದು ಹೇಗೆ?
4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಪಡೆದರೆ ಕಾರ್ಡ್ ಕ್ಯಾನ್ಸಲ್ ಆಗಲಿದೆ. ಸರ್ಕಾರಿ ಉದ್ಯೋಗಿಗಳು ಕಾರ್ಡ್ ಪಡೆಯುವಂತಿಲ್ಲ. ಆದಾಯ ತೆರಿಗೆ ಕಟ್ಟುತ್ತಿದ್ದರೆ ಹಾಗೂ 3 ಹೆಕ್ಟೇರ್ ಜಮೀನಿದ್ದರೆ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗುತ್ತದೆ. 4 ಚಕ್ರದ ವಾಹನಕ್ಕೆ ಹಳದಿ ನಂಬರ್ ಪ್ಲೇಟ್ ಇದ್ದರೆ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.