ಹೊಸದಿಗಂತ ವರದಿ ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಗೊಂದಲಗಳನ್ನು ಮುಂದುವರೆಸಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮನೆ ಬಾಡಿಗೆ ವಿಚಾರದಲ್ಲಿ ಗೊಂದಲ ನಡೆದಿದೆ. ದಿನಕ್ಕೆ ಒಂದು ಹೇಳಿಕೆ ನೀಡುತ್ತಾರೆ. ಹೊಸ ಕಂಡಿಷನ್ ಹಾಕುತ್ತಾರೆ ಎಂದು ಆಕ್ಷೇಪಿಸಿದರು.
ಗೃಹಿಣಿಗೆ ಎರಡು ಸಾವಿರ ನೀಡುವ ವಿಷಯದಲ್ಲಿ ಹಾಗಾಗಿದೆ. ಮೊದಲು ಷರತ್ತೇ ಇರಲಿಲ್ಲ. ಈಗ ಹೊಸ ಕಂಡಿಷನ್ ಹಾಕುತ್ತಿದ್ದಾರೆ ಎಂದರು. ವಿದ್ಯುತ್ ದರ ತೀವ್ರ ಏರಿಕೆ, ದುಬಾರಿ ದರ ವಿಧಿಸಿ ಜನರಿಂದ ಪಡೆದು ಜನರಿಗೆ ಕೊಡುವ ಒಳ್ಳೆಯ ಸ್ಕೀಂ ಎಂದು ವ್ಯಂಗ್ಯವಾಡಿದರು. ರಾಜ್ಯದ ಜನ ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು. ಪ್ರಣಾಳಿಕೆಯಂತೆ, ಮಾತು ಕೊಟ್ಟಂತೆ ನಡೆಯಲು ಆಗ್ರಹಿಸಬೇಕಿದೆ ಎಂದರು.
ಕರೆಂಟ್ ಕೊಡಲು, ಎರಡು ಸಾವಿರ ಕೊಡಲು ಜಾತಿ ಬೇಕಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕೆಲವು ಜಾತಿಗಳನ್ನು ಹೊರಗಿಡುವ ಹುನ್ನಾರವನ್ನು ಖಂಡಿಸುವುದಾಗಿ ಹೇಳಿದರು. ಕೆಲವು ಜಾತಿಗಳನ್ನು ತುಳಿಯುವುದೇ ಜಾತಿಗಣತಿ ಉದ್ದೇಶ ಎಂದು ಆರೋಪಿಸಿದರು.