ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಇಂದು ತನ್ನ ಪ್ರಣಾಳಿಕೆಯನ್ನುಬಿಡುಗಡೆ ಮಾಡಿದೆ.
ಜಾತಿಗಣ, ರೈತರ ಸಾಲ ಮನ್ನಾ, ಕ್ವಿಂಟಲ್ ಭತ್ತವನ್ನು ₹3,200ಕ್ಕೆ ಖರೀದಿಸುವ ಮತ್ತು ಅಡುಗೆ ಅನಿಲ ಸಿಲಿಂಡರ್ಗೆ ಸಬ್ಸಿಡಿ ನೀಡುವ ಭರವಸೆ ನೀಡಿದೆ.
ಮೊದಲ ಹಂತದ ಮತದಾನ ನಡೆಯುವ ಎರಡು ದಿನಗಳ ಮೊದಲು ರಾಯಪುರ, ರಾಜನಂದಗಾಂವ್, ಜಗದಾಲಪುರ, ಬಿಲಾಸಪುರ, ಅಂಬಿಕಾಪುರ ಮತ್ತು ಕವರ್ಧಾದಲ್ಲಿ ‘ಭರವಸೆಯ ಘೋಷಣಾ ಪತ್ರ 2023-28’ ಶೀರ್ಷಿಕೆಯ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ರೈತರ ಸಾಲ ಮನ್ನಾ, ಜಾತಿಗಣತಿ, ಎಕರೆಗೆ 20 ಕ್ವಿಂಟಲ್ ಭತ್ತ ಖರೀದಿ, ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಚಾರದ ವೇಳೆ ನೀಡಿದ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿ ಭೂಪೇಶ್ ಬಘೆಲ್ ಮಾತನಾಡಿ, ‘ಭತ್ತ ಬೆಳೆಗಾರರಿಗೆ ಪ್ರಸ್ತುತ ರಾಜೀವ್ ಗಾಂಧಿ ನ್ಯಾಯ್ ಯೋಜನೆಯ ಅಡಿ ನೀಡಲಾಗುತ್ತಿರುವ ಇನ್ಪುಟ್ ಸಬ್ಸಿಡಿ ಸೇರಿದಂತೆ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ ₹3,200 ನೀಡಲಾಗುವುದು. ತೆಂಡು ಎಲೆ ಸಂಗ್ರಹಿಸುವವರಿಗೆ ವಾರ್ಷಿಕ ₹4,000 ಬೋನಸ್ ನೀಡಲಾಗುವುದು’ ಎಂದು ಅವರು ಹೇಳಿದರು.
‘ತಾಯಂದಿರು ಮತ್ತು ಸಹೋದರಿಯರಿಗೆ ಮಹತಾರಿ ನ್ಯಾಯ್ ಯೋಜನೆ ಪ್ರಾರಂಭಿಸಲಾಗುವುದು. ಮಹಿಳೆಯರಿಗೆ ಪ್ರತಿ ಅಡುಗೆ ಅನಿಲ ಸಿಲಿಂಡರ್ಗೆ ₹500 ಸಬ್ಸಿಡಿ ನೀಡಲಾಗುವುದು. ಸಬ್ಸಿಡಿ ಮೊತ್ತವನ್ನು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು’ ಎಂದು ತಿಳಿಸಿದರು.