ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಧಾನಿ ನರೇಂದ್ರಮೋದಿಯವರನ್ನು ʼಗುಜರಾತಿನ ಕಟುಕʼ ಎನ್ನುವ ಮೂಲಕ ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೋ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಕುರಿತು ಭಾರತದಲ್ಲಿ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದರೆ ಭಾರತದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮಾತ್ರ ಜಾಣ ಮೌನ ವಹಿಸಿ ಕೂತಿದೆ. ಕಾಂಗ್ರೆಸ್ಸಿನ ಯಾವೊಬ್ಬ ರಾಜಕಾರಣಿಯೂ ಈ ಕುರಿತು ಚಕಾರ ಶಬ್ದವೆತ್ತಿಲ್ಲ. ಕಾಂಗ್ರೆಸ್ಸಿನ ಈ ಜಾಣ ಮೌನದ ಕುರಿತು ಹಲವರು ಈಗ ಪ್ರಶ್ನೆಯೆತ್ತುತ್ತಿದ್ದಾರೆ. ಇಂದು ಮೋದಿಯವರಿಗೆ ಅಪಮಾನ ಮಾಡಿದಾಗ ಸುಮ್ಮನಿರುವ ಕಾಂಗ್ರೆಸ್ ಅಂದು ಮನ ಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವಮಾನಿಸಿದಾಗ ಮೋದಿಯವರ ಪ್ರತಿಕ್ರಿಯೆ ಏನಿತ್ತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು.
ನರೇಂದ್ರ ಮೋದಿಯವರಿನ್ನೂ ಭಾರತದ ಪ್ರಧಾನಿಯಾಗಿರಲಿಲ್ಲ. ಅಂದು ಭಾರತದ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ʼದೇಹಾದಿ ಔರತ್ʼ (ಹಳ್ಳಿಗಾಡಿನ ಹೆಂಗಸು) ಎನ್ನುವ ಮೂಲಕ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವಮಾನಿಸಿದ್ದರು. ಆಗ ನರೇಂದ್ರಮೋದಿಯವರು ಪಕ್ಷಾತೀತವಾಗಿ ಅವರ ಪರವಾಗಿ ಮಾತನಾಡಿದರು. “ಭಾರತದಲ್ಲಿ ಆಂತರಿಕವಾಗಿ ನೀತಿ ನಿರೂಪಣೆಗಳ ವಿಷಯದಲ್ಲಿ ನಾವು ಪ್ರಧಾನಿಗಳೊಂದಿಗೆ ಜಗಳವಾಡುತ್ತೇವೆ. ಆದರೆ ನನ್ನ ದೇಶದ ಪ್ರಧಾನಿಮಂತ್ರಿಯವರಿಗೆ ಅವಮಾನಿಸುವ ಅಧಿಕಾರ ನವಾಜ್ ಷರೀಫ್ ಗಿಲ್ಲ” ಎನ್ನುವ ಮೂಲಕ ಪಾಕಿಸ್ತಾನದ ನವಾಜ್ ಷರೀಫ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಮೂಲಕ ಪ್ರಧಾನಿ ಸ್ಥಾನದಲ್ಲಿ ಕೂತಿರುವ ವ್ಯಕ್ತಿ ಯಾವುದೇ ಪಕ್ಷದಿಂದ ಬಂದಿದ್ದರೂ ಅವರು ಸಂಪೂರ್ಣ ಭಾರತದ ಪ್ರದಾನ ಮಂತ್ರಿಯಾಗಿರುತ್ತಾರೆ. ಅವರನ್ನು ಪಕ್ಷ-ಸಿದ್ಧಾಂತಗಳ ಕನ್ನಡಕದಿಂದ ನೋಡುವಂತಾಗಬಾರದು ಎಂಬ ಸಂದೇಶ ಸಾರಿದ್ದರು. ಅಂದು ಮೋದಿಯವರ ನಡೆಯಿಂದ ಇಂದಿನ ಕಾಂಗ್ರೆಸ್ ಪಾಠ ಕಲಿತುಕೊಳ್ಳಬೇಕಿದೆ. ಪ್ರಧಾನಿಯವರನ್ನು ಪಕ್ಷಕ್ಕೆ ಸೀಮಿತಗೊಳಿಸುವ ಕೀಳು ರಾಜಕಾರಣ ಮಾಡುವ ಮಟ್ಟಕ್ಕೆ ಇಳಿಯುವ ದುಸ್ಥಿತಿ ಬರಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.