ಹೊಸದಿಗಂತ ವರದಿ,ಹಾವೇರಿ:
ಕಾಂಗ್ರೆಸ್ನ ಆಡಳಿತದಲ್ಲಿ ಭ್ರಷ್ಟಾಚಾರ ಇಲ್ಲದೆ ಆಡಳಿತ ಮಾಡಿದ ಪ್ರಧಾನಮಂತ್ರಿ ಎಂದರೆ ಅದು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮಾತ್ರ. ಆದರೆ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರು, ಉಪಾಧ್ಯಕ್ಷರು, ರಾಜ್ಯಾಧ್ಯಕ್ಷರು, ಯುವ ಘಟಕದ ರಾಜ್ಯಾಧ್ಯಕ್ಷರು ಬೇಲ್ ನಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ಜರುಗಿದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿ, ಭ್ರಷ್ಟಾಚಾರದ ಪಿತಾಮಹರು ಕಾಂಗ್ರೆಸ್. ಭ್ರಷ್ಟಾಚಾರದ ಪಾರ್ಟಿ ಅಂದ್ರೆ ಅದು ಕಾಂಗ್ರೆಸ್. ಕಾಂಗ್ರೆಸ್ ಭ್ರಷ್ಟಾಚಾರ, ಭಯೋತ್ಪಾದನೆಗೆ ಪ್ರೇರಣೆ, ಒಂದೇ ಪರಿವಾರವನ್ನು ನೆಚ್ಚಿಕೊಂಡಿತು. ಹಿಂದೆ ಇದ್ದ ಕಾಂಗ್ರೆಸ್ಸಿಗರು ಈಗಿಲ್ಲ. ಇವತ್ತು ಇರೋ ಕಾಂಗ್ರೆಸ್ಸಿಗರು ಮೂಲ ಕಾಂಗ್ರೆಸ್ಸಿಗರಲ್ಲ, ನಕಲಿ ಕಾಂಗ್ರೆಸ್ಸಿಗರು ಎಂದು ಕಾಂಗ್ರೆಸ್ಸಿನ ಕೆಲ ನಾಯಕರನ್ನು ಕುಟುಕಿದರು.
ಒಂದು ಕಾಲಘಟ್ಟದಲ್ಲಿ ಈ ದೇಶದಲ್ಲಿ ಇಂದಿರಾ ಗಾಂಧಿ, ಇಂಡಿಯಾ ಅನ್ನೋ ಕಾಲಘಟ್ಟವಿತ್ತು. ನಾನೂರಕ್ಕೂ ಅಧಿಕ ಲೋಕಸಭಾ ಕ್ಷೇತ್ರವಿತ್ತು. ರಾಹುಲ್ ಗಾಂಧಿಗೆ ಜಾಗವಿಲ್ಲದೆ ವಯನಾಡಿಗೆ ಓಡೋಡಿ ಬರುವ ಸ್ಥಿತಿ ಎದುರಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಹಾವೇರಿ ಮಾಡ್ತೇವೆ ಅನ್ನೋ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿಯವರು ಮಾಡಿದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರತ ಜೋಡೋ ನಡಿತಿದೆ. ಇವತ್ತು ರಾಹುಲ್ ಗಾಂಧಿಯವರ ಭಾರತ ಜೋಡೋ ನಡಿತಿರೋದು ಇದೆ ರಸ್ತೆಗಳಲ್ಲಿ. ಭಾರತ ಜೋಡೋ ಮಾಡಿದ್ದು ಕಾಂಗ್ರೆಸ್ ಅಲ್ಲ. ಭಾರತವನ್ನು ತುಂಡು ತುಂಡಾಗಿ ಮಾಡಿದ್ದು ಕಾಂಗ್ರೆಸ್. ವಿಭಜನೆಯುಕ್ತವಾಗಿದ್ದು ಕಾಂಗ್ರೆಸ್ ಎಂದರು.
ಜನರು ಕಾಂಗ್ರೆಸ್ನ್ನು ಹೊರಗಿಟ್ಟಿದ್ದಾರೆ. ಹೀಗಾಗಿ ಭಾರತ ಜೋಡೋ ನಾಟಕ ಶುರು ಮಾಡಿದ್ದಾರೆ. ಅದು ಭಾರತ ಜೋಡೋ ಅಲ್ಲ, ಭಾರತ ತೋಡೋ. ಜೋಡೋ ಯಾತ್ರೆಯ ಮಧ್ಯೆ ಜಗಳ ಶುರುವಾಗಿದೆ. ಪಾದಯಾತ್ರೆಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಜಗಳ ಶುರುವಾಗಿದೆ. ಡಿಕೆಶಿ ಪಾರ್ಟಿ ಮತ್ತು ಸಿದ್ದರಾಮಯ್ಯ ಪಾರ್ಟಿ ಆಗುತ್ತೆ.
ಭಯೋತ್ಪಾದನೆಗೆ ಕಾಂಗ್ರೆಸ್ ಪ್ರಚೋದನೆ ಕೊಟ್ಟಿತ್ತು. ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಹಳ್ಳಿಹಳ್ಳಿಗಳಲ್ಲಿ ಬಾಂಬ್ ಸ್ಫೋಟ ಆಗಿತ್ತಿತ್ತು. ನರೇಂದ್ರ ಮೋದಿಯವರ ಸರಕಾರ ಬಂದ್ಮೇಲೆ ಎಲ್ಲೂ ಬಾಂಬ್ ಸ್ಫೋಟ ಆಗಿಲ್ಲ. ಕೇವಲ ಭಯೋತ್ಪಾದನೆ ಮಾತ್ರವಲ್ಲ ನಕ್ಸಲ್ವಾದ ಕೂಡ ನಿಂತಿದೆ ಎಂದು ತಿಳಿಸಿದರು.
ಸಿದ್ದರಾಮಣ್ಣನ ಅಧಿಕಾರದ ಅವಧಿಯಲ್ಲಿ ಪಿಎಫ್ಐ ಬ್ಯಾನ್ ಮಾಡೋ ಕೆಲಸ ಆಗಲಿಲ್ಲ.
ಪಿಎಫ್ಐ ಬ್ಯಾನ್ ಮಾಡಿದ್ದೇವೆ. ನಿಮ್ಮ ಹಾಗೆ ಮತಬ್ಯಾಂಕ್ಗಾಗಿ ಅವರ ಕಾಲು ನೆಕ್ಕೋ ಕೆಲಸವನ್ನು ನಾವು ಮಾಡೋದಿಲ್ಲ ಎಂದರು.