ಹೊಸ ದಿಗಂತ ವರದಿ, ಶಿವಮೊಗ್ಗ:
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಯಾರಿಂದಲಾದರೂ ಲಂಚ ಸ್ವೀಕರಿಸಿ ಕೆಲಸ ಕೊಡಿಸಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಬಾಲರಾಜ ಅರಸ್ ರಸ್ತೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜನ ಧ್ವನಿ-ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 30 ಸಾವಿರ ಮಂದಿಗೆ ಉದ್ಯೋಗ ನೇಮಕಾತಿ ಆಗಿದೆ. ಅದರಲ್ಲಿ ಯಾರಾದರೂ ಒಬ್ಬರು ಡಿಕೆಶಿಗೆ 10 ರೂ. ಕೊಟ್ಟಿದ್ದೇನೆ ಎಂದು ಹೇಳಿಬಿಟ್ಟರೆ ಇಂದೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅಷ್ಟೊಂದು ಶುದ್ಧ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ಆದರೆ ಈಗಿನ ಬಿಜೆಪಿ ಸರ್ಕಾರದಲ್ಲಿ ಲಂಚ ಇಲ್ಲದೇ ಎಲ್ಲಿಯೂ ಕೆಲಸ ಆಗುತ್ತಿಲ್ಲ. ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ನಗರಸಭೆ, ಲೋಕೋಪಯೋಗಿ ಇಲಾಖೆಯಿಂದ ಹಿಡಿದು ಎಲ್ಲಾ ಕಡೆ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದರು.
ಕೇಸರಿ ಬದಲು ಕೆಂಪು ತಗೊಳಿ..
ಮಾಜಿ ಸಚಿವ ಈಶ್ವರಪ್ಪ ಅವರು ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಹಾರಿಸುವುದಾಗಿ ಹೇಳಿದ್ದರು. ಇವರ ಪಕ್ಷದಲ್ಲಿ ಯಾರಾದರೂ ದೇಶಕ್ಕಾಗಿ ತ್ಯಾಗ ಮಾಡಿದ್ದಾರಾ? ಇಂದಿರಾ ಗಾಂಧಿ, ಮಹಾತ್ಮ ಗಾಂಧಿ, ರಾಜೀವ್ ಗಾಂಧಿದೇಶಕ್ಕಾಗಿ ದೇಹವನ್ನೇ ತ್ಯಾಗ ಮಾಡಿದ್ದಾರೆ. ಮಠಗಳಲ್ಲಿ ಕೇಸರಿ ಬಣ್ಣ ಬಳಸುತ್ತಾರೆ. ಇತ್ತೀಚೆಗೆ ಬಿಜೆಪಿಯವರು ಕೇಸರಿ ಟೋಪಿ ಹಾಕಲು ಶುರು ಮಾಡಿದ್ದಾರೆ. ಬಿಜೆಪಿಯವರಿಗೆ ರಕ್ತ ಎಂದರೆ ಬಹಳ ಇಷ್ಟ. ಹಾಗಾಗಿ ಕೆಂಪು ಬಣ್ಣವನ್ನು ಆರಿಸಿಕೊಳ್ಳಲಿ ಎಂದು ಅಣಕವಾಡಿದರು.