ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಇಂದು ಹೊಸ ಮುಖ್ಯಸ್ಥರನ್ನು ಚುನಾಯಿಸಲಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಸುಮಾರು 9,000 ಪ್ರದೇಶ ಕಾಂಗ್ರೆಸ್ ಸಮಿತಿ (PCC) ಪ್ರತಿನಿಧಿಗಳು ಕಾಂಗ್ರೆಸ್ ಮುಖ್ಯಸ್ಥ ಹುದ್ದೆ ಆಕಾಂಕ್ಷಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಅಭ್ಯರ್ಥಿಗಳಾಗಿ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿದ್ದಾರೆ. ಅಕ್ಟೋಬರ್ 19 ರಂದು ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಪಕ್ಷದ ಸುಮಾರು 137 ವರ್ಷಗಳ ಇತಿಹಾಸದಲ್ಲಿ ಇದು ಕೇಲವ ಆರನೇ ಬಾರಿಗೆ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯಾಗಿದೆ. ಖರ್ಗೆ ಅವರು ಗಾಂಧಿ ಕುಟುಂಬದ ʼಒಲವು ಗಳಿಸಿರುವ ಅಭ್ಯರ್ಥಿ’ ಎಂದು ಪರಿಗಣಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಹಿರಿಯ ನಾಯಕರು ಅವರನ್ನು ಬೆಂಬಲಿಸಿದ್ದಾರೆ, ಮತ್ತೊಬ್ಬ ಅಭ್ಯರ್ಥಿ ತರೂರ್ ಕಾಂಗ್ರೆಸ್ ನಲ್ಲಿ ಬದಲಾವಣೆ ತರುವ ಅಭ್ಯರ್ಥಿಯಾಗಿ ತಮ್ಮನ್ನು ಬಿಂಬಿಸಿಕೊಂಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇಬ್ಬರೂ ಅಭ್ಯರ್ಥಿಗಳು ದೇಶಾಂದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ. ಖರ್ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕಾಂಗ್ರೆಸ್ನಲ್ಲಿ ಸೋನಿಯಾ ʼಪ್ರಮುಖ ವ್ಯಕ್ತಿʼ ಮತ್ತು ಸೋನಿಯಾ ಗಾಂಧಿಯವರ ಮಾರ್ಗದರ್ಶನ ಮತ್ತು ಸಲಹೆಯಿಲ್ಲದೆ ಪಕ್ಷವು ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಏತನ್ಮಧ್ಯೆ, ಸ್ಪರ್ಧಿಗಳ ನಡುವೆ ತಾರತಮ್ಯ ನಡೆಸಲಾಗಿದೆ ಎಂದು ತರೂರ್ ಆರೋಪಿಸಿದ್ದಾರೆ. ಹಲವಾರು ಕೆಪಿಸಿಸಿ ಮುಖ್ಯಸ್ಥರು ಮತ್ತು ಹಿರಿಯ ನಾಯಕರು ತಾನು ಅವರ ರಾಜ್ಯಗಳಿಗೆ ಭೇಟಿ ನೀಡಿದಾಗ ʼತಾವು ಬಿಡುವಿಲ್ಲʼ ಎಂದಿದ್ದರು. ಆದರೆ, ಅವರು ಖರ್ಗೆ ಅವರನ್ನು ಸ್ವಾಗತಿಸಿದರು ಮತ್ತು ಬೆಂಬಲವನ್ನು ತೋರಿಸಿ ಎಂದು ತರೂರ್ ಆರೋಪಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ