ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿದೆ. ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ಈ ಯಾತ್ರೆ ಕುರಿತುಟೀಕೆ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇದನ್ನು ‘ಶತಮಾನದ ದೊಡ್ಡ ಜೋಕ್’ ಎಂದಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ತನ್ನ ಯಾತ್ರೆಯನ್ನು ಭಾರತದಲ್ಲಿ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿ ಆರಂಭಿಸಬೇಕಿತ್ತು ಎಂದೂ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಬಗ್ಗೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಪ್ರತಿಕ್ರಿಯೆ ನೀಡಿದ ಅಸ್ಸಾಂ ಸಿಎಂ, ಇದು ಕಾಮಿಡಿಯಲ್ಲವೇ. ನೀವು (ಕಾಂಗ್ರೆಸ್) 1947 ರಲ್ಲಿ ದೇಶವನ್ನು ವಿಭಜನೆ ಮಾಡಿದ್ರಿ. ಹಾಗೂ, ಈಗ ಭಾರತ್ ಜೋಡೋ ಆಗಲು ನೀವು ಬಯಸುತ್ತೀರಿ. ಹಾಗೂ, ದೇಶ ಏಕತೆಯಿಂದ ಇರುವ ಕಡೆ ನೀವು ಇದನ್ನು ಮಾಡಲು ಪ್ರಯತ್ನ ಪಡುತ್ತಿದ್ದೀರಿ. ಈ ಹಿನ್ನೆಲೆ ಏಕೀಕರಣ ಬೇಕೆಂದರೆ ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ ಹೋಗಿ ಭಾರತ್ ಜೋಡೋ ಯಾತ್ರೆ ಆರಂಭಿಸಬೇಕು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
’ಭಾರತ್ ಜೋಡೋ ಯಾತ್ರೆ ಶತಮಾನದ ಕಾಮಿಡಿಯಾಗಿದೆ. ನಾವು ಇಂದು ವಾಸಿಸುತ್ತಿರುವ ಭಾರತ ಚೇತರಿಸಿಕೊಂಡಿದೆ, ದೃಢವಾಗಿದೆ ಮತ್ತು ಐಕ್ಯತೆಯಿಂದ ಕೂಡಿದೆ. ಭಾರತ ವಿಭಜನೆಯಾಗಿದ್ದು ಒಂದೇ ಬಾರಿ, ಅದು 1947 ರಲ್ಲಿ ಮಾತ್ರ. ಕಾಂಗ್ರೆಸ್ ಒಪ್ಪಿಕೊಂಡಿದ್ದಕ್ಕೆ ಆ ವಿಭಜನೆಯಾಗಿದೆ. ಈ ಹಿನ್ನೆಲೆ ದೇಶವನ್ನು ಜೋಡಿಸಬೇಕಾದರೆ ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ ಹೋಗಿ ಭಾರತ್ ಜೋಡೋ ಯಾತ್ರೆ ಮಾಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.