ಹೊಸದಿಗಂತ ವರದಿ, ಹಾಸನ:
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದಿದ್ದು ಗದ್ದಲ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಅರಕಲಗೂಡು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀಧರ್ ಗೌಡ ಅವರು ಮಾತನಾಡುವ ವೇಳೆ ಈ ಬಾರಿ ಅರಕಲಗೂಡಿನಲ್ಲಿ 30 ಸಾವಿರ ಲೀಡ್ ಕೊಡ್ತೇವೆ ಎಂದರು. ಅದಾದ ಬಳಿಕ ಸಚಿವ ಕೆ. ಎನ್ ರಾಜಣ್ಣ ಶ್ರೀಧರ್ ಗೌಡ ಮಾತನ್ನ ತನ್ನ ಭಾಷಣದಲ್ಲಿ ಉಲ್ಲೇಖಿಸಿ ಮಾತನಾಡಿ 30 ಸಾವಿರ ಲೀಡ್ ನೀಡೋನು ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ ಎಂದು ಕೇಳಿದರು.
ಈ ವೇಳೆ ರಾಜಣ್ಣ ವಿರುದ್ಧ ಮುಗಿಬಿದ್ದ ಶ್ರೀಧರ್ ಅಭಿಮಾನಿಗಳು ರಾಜಣ್ಣ ಭಾಷಣಕ್ಕೆ ಅಡ್ಡಿಪಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆದಾದ ಬಳಿಕ ಮತ್ತೆ ಭಾಷಣ ಮುಂದುವರೆಸಿದ ರಾಜಣ್ಣ ಇವರ ಗದ್ದಲಕ್ಕೆ ತಾನು ತಲೆ ಕೆಡಿಸಿಕೊಳ್ಳಲ್ಲ ಇಂತಹ ಬಾಡಿಗೆ ಗಿರಾಕಿಗಳ ಕೂಗಾಟಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದರು.
ಕೆ. ಎನ್ ರಾಜಣ್ಣ ಅವರ ಮಾತಿಗೆ ರೊಚ್ಚಿಗೆದ್ದ ಶ್ರೀಧರ್ ಗೌಡ ಬೆಂಬಲಿಗರು ರಾಜಣ್ಣ ವಿರುದ್ದ ತೀರ್ವ ಅಸಮಾಧಾನ ವ್ಯಕ್ತಪಡಿಸಿದರು. ಯಾರು ಬಾಡಿಗೆ ಗಿರಾಕಿಗಳು ಎಷ್ಟು ಬಾಡಿಗೆ ಕೊಟ್ಟಿದ್ದೀರಿ ನಮಗೆ ಎನ್ನುತ್ತಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಗೆ ಹೊಸದಾಗಿ ಕಾಂಗ್ರೆಸ್ ಉಸ್ತುವಾರಿಯಾಗಿ ಬಂದಿರೋ ಸಂಸದ ಚಂದ್ರಶೇಖರ್ ಅವರೇ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು ನಂತರ ಸ್ವತಃ ಶ್ರೀಧರ್ ಗೌಡ ಅವರೇ ತಮ್ಮ ಬೆಂಬಲಿಗರನ್ನು ಪರಿ ಪರಿಯಾಗಿ ಬೇಡಿಕೊಂಡರು ಕಾರ್ಯಕರ್ತರು ಅವರ ಮಾತಿಗೂ ಬೆಲೆ ಕೊಡದೆ ಕೆ.ಎನ್ ರಾಜಣ್ಣ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದರು. ಈ ವೇಳೆ ಮತ್ತೆ ಭಾಷಣ ನಿಲ್ಲಿಸಿ ಸಿಟ್ಟಿನಿಂದ ವೇದಿಕೆ ಮೇಲೆ ರಾಜಣ್ಣ ಕುಳಿತರು.
ಅದಾದ ಬಳಿಕ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕೆ ಕಾರ್ಯಕರ್ತರ ಮೇಲೆ ವೇದಿಕೆ ಮೇಲಿದ್ದ ನಾಯಕರುಗಳು ಎರಗಿದರು.
ಈ ವೇಳೆ ವೇದಿಕೆ ಕೆಳಗೆ ಕೈ ಕೈ ಮಿಲಾಯಿಸಲು ಮುಂದಾದ ಕಾರ್ಯಕರ್ತರ ಗಲಾಟೆಯಿಂದ ಚುನಾವಣಾ ಉಸ್ತುವಾರಿ ಚಂದ್ರಶೇಖರ್ ಮುಜುಗರಕ್ಕೆ ಒಳಗಾದರು.
ಕಾರ್ಯಕರ್ತರನ್ನ ನಿಯಂತ್ರಿಸಲು ಮುಖಂಡರ ಹರಸಾಹಸ ಪಟ್ಟು ಬಳಿಕ ಗಲಾಟೆ ಮಾಡಿದ ಕಾರ್ಯಕರ್ತರ ವಿರುದ್ಧ ಜಿಲ್ಲಾ ಮುಖಂಡರು ವಾಗ್ದಾಳಿ ನಡೆಸಿ, ಬಳಿಕ ಅವರನ್ನು ವೇದಿಕೆ ಬಳಿಯಿಂದ ದೂರ ಕಳಿಸಿ ಸಭೆ ಮುಂದುವರೆಸಿದರು.