ಹೊಸದಿಗಂತ ವರದಿ,ವಿಜಯಪುರ:
ತಿರುಪತಿ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಲು ಯತ್ನ ಮಾಡಿದವರನ್ನು ಗಲ್ಲಿಗೇರಿಸುವ ಕೆಲಸವಾಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇದೊಂದು ದೊಡ್ಡ ಆಘಾತಕಾರಿ ಸುದ್ದಿ, ಸನಾತನ ಧರ್ಮದ ಪಾವಿತ್ರ್ಯತೆ ಹಾಳು ಮಾಡಲು, ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಅನೇಕ ವಿರೋಧ ಪಕ್ಷಗಳು ಷಡ್ಯಂತ್ರ ನಡೆಸುತ್ತಿವೆ ಎಂದರು.
ಜಗನಮೋಹನ ರೆಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಇವರು ಹಿಂದು ಹೆಸರನ್ನು ಇಟ್ಟುಕೊಂಡಿದ್ದಾರೆ. ತಿರುಪತಿ ದೇವಸ್ಥಾನದ ಹಿಂದಿನ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯವರ ಚಿಕ್ಕಪ್ಪ ಅವನೂ ಕ್ರಿಶ್ಚಿಯನ್. ಹಿಂದು ಧರ್ಮದ ಧಾರ್ಮಿಕ ಸಂಸ್ಥೆಗಳಲ್ಲಿ ಹಿಂದುಗಳೇ ಅಧ್ಯಕ್ಷರಾಗಿರಬೇಕು. ಆಗ ಮಾತ್ರ ಅದು ಪಾವಿತ್ರ್ಯತೆ ಉಳಿಯುತ್ತದೆ ಎಂದರು.
ಮೀನಿನ ಎಣ್ಣೆ, ಹಂದಿ ಮತ್ತು ಗೋವಿನ ಕೊಬ್ಬು ಮಿಶ್ರಣ ಮಾಡುವ ಮೂಲಕ ಇಡೀ ಹಿಂದು ಸಮಾಜಕ್ಕೆ ದೊಡ್ಡ ಆಘಾತವಾಗಿದೆ. ಇದನ್ನು ಇಷ್ಟಕ್ಕೆ ಬಿಡಬಾರದು, ಈ ವಿಚಾರವಾಗಿ ಕೇಂದ್ರದ ಆಹಾರ ಮಂತ್ರಿಗಳು ವರದಿ ಕೇಳಿದ್ದಾರೆ. ಇಲ್ಲವಾದರೆ ಹಿಂದು ಧರ್ಮದ ಮೇಲೆ ಏನೇ ದಬ್ಬಾಳಿಕೆ ಮಾಡಿದರೆ ನಡೆಯುತ್ತದೆ ಅಂದು ಕೊಳ್ಳುತ್ತಾರೆ ಎಂದರು.
ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸಹಿತ ಹಿಂದು ಏತರ ಯಾವುದೇ ನೌಕರರು ಇರಬಾರದು. ದೇವಸ್ಥಾನದ ವ್ಯವಸ್ಥಾಪನ ಮಂಡಳಿಯಲ್ಲಿ ಸಹಿತ ಹಿಂದುಗಳೇ ಇರಬೇಕು. ಹಿಂದು ಏತರು ಯಾರಾದರೂ ಇದ್ದರೆ ಅವರನ್ನು ತೆಗೆದು ಹಾಕಬೇಕು. ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿರುವ ದೇವಸ್ಥಾನ ತೆಗೆದು ಹಿಂದು ಆಡಳಿತದ ಕೈಗೆ ಕೊಡಬೇಕು ಎಂದರು.
ಮಸೀದಿ, ಚರ್ಚ್ ಮೇಲೆ ಸರ್ಕಾರದ ಕಂಟ್ರೋಲ ಇಲ್ಲ. ಆದರೆ ಹಿಂದು ದೇವಾಲಯಗಳ ಮೇಲೆ ಸರ್ಕಾರದ ಕಂಟ್ರೋಲ್. ದೇವಾಲಯದ ಹಣ ತಿನ್ನುವ ದುರ್ಬುದ್ದಿ ಹಿಂದುಗಳಲ್ಲಿ ಇಲ್ಲ. ನಾನು ಕೇಂದ್ರ ಸರ್ಕಾರಕ್ಕೂ ಆಗ್ರಹ ಮಾಡುವೆ ಎಂದರು.
ಮುಜರಾಹಿ ಇಲಾಖೆ ತಗೆದು ಹಾಕಿ, ಹಿಂದುಗಳ ಆಡಳಿತ ಮಂಡಳಿಯನ್ನು ರಚನೆ ಮಾಡಬೇಕು. ಹಿಂದುಗಳದ್ದು ಒಂದು ಟ್ರಸ್ಟ್ ಮಾಡಬೇಕು, ಅದರ ಅನುದಾನ ಹಿಂದು ಧರ್ಮದ ರಕ್ಷಣೆಗಾಗಿ ಬಳಕೆಯಾಗಬೇಕು ಎಂದರು.
ಸನಾತನ ಧರ್ಮ ರಕ್ಷಣಾ ಬೋರ್ಡ ಮಾಡಬೇಕು. ಟ್ರಸ್ಟ್ ನಲ್ಲಿರುವವರು ಅವ್ಯವಹಾರ ಮಾಡಿದರೆ ಅವರ ಮೇಲೆ ಸೂಕ್ತ ಕ್ರಮವನ್ನು ಸನಾತನ ಬೋರ್ಡ್ ನವರು ಜರುಗಿಸಬೇಕು ಎಂದರು.
ಆ ಸನಾತನ ಬೋರ್ಡ್ ನಲ್ಲು ಸುಪ್ರೀಂ ಕೋರ್ಟ್ ನ ನಿವೃತ್ತ ಜಡ್ಜ್ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹೈಕೋರ್ಟ್ ನಿವೃತ್ತ ಜಡ್ಜ್ ಅನ್ನು ಅಧ್ಯಕ್ಷರನ್ನು ಮಾಡಬೇಕು. ತಿರುಪತಿ ತಿರುಮಲ ದೇವಸ್ಥಾನ ಅಪವಿತ್ರ ಮಾಡಿದವರಿಗೆ ಗಲ್ಲಿಗೇರಿಸಬೇಕು ಎಂದರು.