ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ರಾಜಕೀಯ ಚರ್ಚೆಯ ವೇದಿಕೆಯಾಗಿದ್ದು, ಇದು ಬಡವರ ಮತಗಳನ್ನು ತೆಗೆಯಲು ಮಾಡುವ ಸಂಚು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಡವರ ಮತಗಳನ್ನು ತೆಗೆಯಲು ಎಸ್ಐಆರ್ ಮೂಲಕ ಸಂಚು ನಡೆಯುತ್ತಿದ್ದು, ಈ ಕುರಿತು ಎಚ್ಚರಿಕೆಯಿಂದ ಇರಲು ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.
ಜಾಗೃತಿ ಮೂಡಿಸಲು ಸೂಚನೆ
ಈ ಕುರಿತು ನಮ್ಮ ಶಾಸಕರು, ಬಿಎಲ್ಎಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ದಿನಾಂಕ ಘೋಷಣೆಯಾಗಿದೆ. ನಾವು ಜಾಗೃತಿಗೆ ಮುಂದಾಗಿದ್ದೇವೆ. ಈ ಸಂಬಂಧ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಬೇಕಿದೆ. ಇಲ್ಲದಿದ್ದರೆ ನಾಗರಿಕರು ತಮ್ಮ ಮತವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಮತದಾನದ ಹಕ್ಕು ಹೋಗುತ್ತೆ
ಈಗಾಗಲೇ ಬೇರೆ ರಾಜ್ಯಗಳಲ್ಲಿ ಏನು ಆಗಿದೆ ಎಂಬುವುದನ್ನು ನಾವು ನೋಡಿದ್ದೇವೆ. ಜನರ ಮತದಾನದ ಹಕ್ಕು ಹೋದರೆ ಅವರ ಪಿಂಚಣಿ ಸಹಿತ ಸರಕಾರದ ಎಲ್ಲಾ ಯೋಜನೆಗಳಿಂದ ವಂಚಿತರಾಗುತ್ತಾರೆ. ಹಾಗಾಗಿ ಜಾಗೃತಿ ಮೂಡಿಸುವ ಕೆಲಸ ಅಗತ್ಯವಿದೆ ಎಂದರು.



