ಹೊಸದಿಗಂತ ವರದಿ,ಮಡಿಕೇರಿ:
ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯಡಿ ಕೂಡಿಗೆಯಲ್ಲಿ 56 ಎಕರೆ ಜಾಗವನ್ನು ಕಾದಿರಿಸಲಾಗಿದ್ದು, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಗುರುವಾರ ಜಾಗವನ್ನು ಪರಿಶೀಲಿಸಿರು.
ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ನಿರ್ಮಿಸುವ ರಾಜ್ಯ ಸರಕಾರದ ನೂತನ ಯೋಜನೆ ಅನ್ವಯ ಕೂಡಿಗೆಯಲ್ಲಿ ಜಾಗವನ್ನು ಕಾಯ್ದಿರಿಸಲಾಗಿದ್ದು, ಕಳೆದ 5 ವರ್ಷಗಳಿಂದ ವಿಮಾನ ಯಾನ ಇಲಾಖೆಯ ಅಧಿಕಾರಿಗಳು ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವರ್ಗದವರು ಕೂಡಿಗೆ ಕೃಷಿ ಕ್ಷೇತ್ರದ ಜಾಗವನ್ನು ಪರಿಶೀಲಿಸಿ ಸರಕಾರಕ್ಕೆ ವರದಿ ನೀಡಿದ್ದರು.
ಅದರಂತೆ ಜಿಲ್ಲಾಧಿಕಾರಿಯವರು ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಕೂಡಿಗೆ ಕೃಷಿ ಕ್ಷೇತ್ರ ಆವರಣದಲ್ಲಿರುವ 56 ಎಕರೆಗಳಷ್ಟು ಪ್ರದೇಶದ ಜಾಗವನ್ನು ವೀಕ್ಷಿಸಿದರು.
ವಿದ್ಯುತ್ ವಿತರಣಾ ಘಟಕ: ಕುಶಾಲನಗರದಲ್ಲಿರುವ 66ಕೆವಿ ವಿದ್ಯುತ್ ವಿತರಣಾ ಘಟಕವನ್ನು ಕೂಡಿಗೆಯಲ್ಲಿ ಆರಂಭಿಸಲು ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಈಗಾಗಲೇ ಎರಡು ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದ್ದು, ಇದನ್ನೂ ಜಿಲ್ಲಾಧಿಕಾರಿ ಡಾ. ಸತೀಶ ಅವರು ಪರಿಶೀಲನೆ ನಡೆಸಿದರು.
ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಈಗಾಗಲೇ ಗುರುತಿಸಲ್ಪಟಿರುವ ಸ್ಧಳಕ್ಕೆ ಭೇಟಿ ನೀಡಿದ ಅವರು, ಆ ಜಾಗದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರಲ್ಲದೆ, ನಿಯಮನುಸಾರವಾಗಿ ವಿದ್ಯುತ್ ವಿತರಣಾ ಘಟಕ ಅರಂಭಿಸಲು ಬೇಕಾಗುವ ದಾಖಲೆಯನ್ನು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ಸಂತೋಷ್, ಇಲಾಖೆ ಇಂಜಿನಿಯರ್ ರಾಣಿ, ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.