ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭಿಕ್ಷಾಟನೆಯನ್ನು ಎರಡು ಮೂರು ತಿಂಗಳಿನಲ್ಲಿ ನಿಯಂತ್ರಣ ಮಾಡುವ ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಅವರು,ಸದ್ಯಬೆಂಗಳೂರಿನಲ್ಲಿ ಭಿಕ್ಷಾಟನೆ ನಿಯಂತ್ರಿಸುವ ಅನಿವಾರ್ಯತೆ ಇದೆ. ಯಾವುದೋ ಮಕ್ಕಳನ್ನು ಬಾಡಿಗೆಗೆ ಪಡೆದು ಅವರಿಗೆ ಮತ್ತು ಬರುವ ಔಷಧ ನೀಡಿ ಮಗುವನ್ನು ಎತ್ತಿಕೊಂಡು ಅನುಕಂಪ ಗಿಟ್ಟಿಸಿಕೊಂಡು ಭಿಕ್ಷಾಟನೆ ನಡೆಸಲಾಗುತ್ತಿದೆ.
ಬಳಿಕ ಆ ಮಗುವನ್ನು ಪೋಷಕರಿಗೆ ವಾಪಸ್ ಕೊಡುವ ಘಟನೆ ನಡೆಯುತ್ತಿದೆ. ಅವರನ್ನು ರಕ್ಷಿಸಬೇಕಿದೆ. ಅದೇ ರೀತಿ ವೃದ್ಧರನ್ನು ಬಳಸಿಕೊಂಡು ಭಿಕ್ಷಾಟನೆ ಮಾಡಲಾಗುತ್ತಿದೆ. ತೃತೀಯ ಲಿಂಗಿಗಳು ಕೂಡ ಭಿಕ್ಷಾಟನೆ ಮಾಡುತ್ತಿದ್ದು, ಕೆಲ ಕಡೆ ಅಹಿತಕರ ಘಟನೆ ನಡೆಯುತ್ತಿದೆ ಎನ್ನುವುದು ಗಮನಕ್ಕೆ ಬಂದಿದೆ.ಇದರ ನಿಯಂತ್ರಣಕ್ಕಾಗಿಯೇ ಡಿಸಿಪಿ ನೇತೃತ್ವದಲ್ಲಿ 8 ಟಾಸ್ಕ್ ಫೋರ್ಸ್ ರಚಿಸಿದ್ದು, ಭಿಕ್ಷಾಟನೆ ನಿಯಂತ್ರಣಕ್ಕೆ ಯತ್ನಿಸಲಾಗುತ್ತಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಬಂಧನ ಮಾಡುವಂತಿಲ್ಲದ ಕಾರಣ ಕಾನೂನು ಸಚಿವರ ಜೊತೆ ಚರ್ಚಿಸಿ ಅವರ ರಕ್ಷಣೆಗೆ ಕ್ರಮ ವಹಿಸಲಾಗುತ್ತದೆ. ಎರಡು ಮೂರು ತಿಂಗಳಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಭಿಕ್ಷಾಟನೆ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.