ಹೊಸದಿಗಂತ ವರದಿ,ರಾಮನಗರ:
ಕನಕಪುರ ತಾಲ್ಲೂಕಿನ ಮರಳವಾಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, 37 ವಿದ್ಯಾರ್ಥಿಗಳು ಹಾಗೂ 7 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.
ಮರಳವಾಡಿ ಗಡಿ ಭಾಗವಾಗಿದ್ದು ಮೊನ್ನೆಯಷ್ಟೇ ಒಬ್ಬ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡಿತ್ತು.
ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಶಾಲೆಯಲ್ಲಿನ ಉಳಿದ 200 ವಿದ್ಯಾರ್ಥಿಗಳಿಗೆ ಸ್ವಾಬ್ ಟೆಸ್ಟ್ ಮಾಡಿಸಿದ್ದರು. ಈ ಪೈಕಿ 37 ಮಕ್ಕಳಿಗೆ ಸೋಂಕು ಧೃಡಪಟ್ಟಿದೆ.
ಆತಂಕದಲ್ಲಿ ಪೋಷಕರು: ಈ ನಡುವೆಯೇ ವಸತಿ ಶಾಲೆಯ ಆಡಳಿತ ಮಂಡಳಿ ಮಾಡಿರುವ ಎಡವಟ್ಟಿನಿಂದ ಪೋಷಕರು ಆತಂಕಗೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿ ವರದಿ ಬರುವವರೆಗೂ ಕಾಯದೆ ಅವರವರ ಮನೆಗಳಿಗೆ ಕಳುಹಿಸಲಾಗಿದೆ. ಇದೀಗ ಪೋಷಕರಿಗೂ ಕೊರೊನಾ ಹರಡುವ ಭೀತಿ ಉಂಟಾಗಿದೆ. ಅಲ್ಲದೆ ಮರಳವಾಡಿಯು ತಮಿಳುನಾಡಿನ ಗಡಿ ಭಾಗವಾಗಿದ್ದು ವಸತಿ ಶಾಲೆಯಲ್ಲಿದ್ದ ಮಕ್ಕಳು ಬೇರೆ ಬೇರೆ ಗ್ರಾಮದವರಾಗಿದ್ದಾರೆ. ಮರಳವಾಡಿ ಹೋಬಳಿಯಾದ್ಯಂತ ಜನರಲ್ಲಿ ಆತಂಕ ಮನೆ ಮಾಡಿದೆ.
ವಿದ್ಯಾರ್ಥಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ ಎಲ್ಲರನ್ನೂ ಗುರುತಿಸಿ ಅವರನ್ನು ಮನೆಯಲ್ಲಿಯೇ ಐಸೋಲೇಷನ್ಗೊಳಪಡಿಸಲಾಗುವುದು. ಹೆಚ್ಚಾಗಿ ತೊಂದರೆ ಅಥವಾ ಆರೋಗ್ಯದಲ್ಲಿ ಏರುಪೇರು ಕಂಡುಬಂದವರಿಗೆ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.