ಹೊಸದಿಗಂತ ವರದಿ, ಬಳ್ಳಾರಿ:
ಕೋವಿಡ್-19 ಮೂರನೇ ಅಲೆ ಎಲ್ಲರ ಮೇಲೂ ದಾಳಿ ಮಾಡುತ್ತಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ಬಾರಿ ಶಾಲಾ, ಕಾಲೇಜು ಮಕ್ಕಳನ್ನು ಹೆಚ್ಚು ಟಾರ್ಗೆಟ್ ಮಾಡಿದೆ. ಕಳೆದ ಮೊದಲ ಅಲೆಗಿಂದ ಎರಡನೇ ಅಲೆ ವಯಸ್ಕರನ್ನೇ ಟಾರ್ಗೆಟ್ ಮಾಡಿತ್ತು, ಎಲ್ಲರ ಮೇಲೂ ದಾಳಿ ನಡೆಸಿ ಬಲಿ ಪಡೆದೆಕೊಂಡಿತ್ತು. ಮೂರನೇ ಅಲೆ, ಮಕ್ಕಳನ್ನು ಹೆಚ್ಚು ಟಾರ್ಗೆಟ್ ಮಾಡಿದ್ದು, ಇದರ ನಿಯಂತ್ರಣಕ್ಕೆ ಶ್ರಮಿಸುವ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳ ಮೇಲೆ ಸವಾರಿ ಮಾಡಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ 13 ಜನ ಸಿಬ್ಬಂದಿಗಳಿಗೆ ಕೊರೊನಾ ಸೊಂಕು ಇರುವುದು ಶುಕ್ರವಾರ ದೃಢಪಟ್ಟಿದೆ ಎಂದು ಹೇಳಲಾಗುತ್ತಿದ್ದು, ಕಚೇರಿ ಸೀಲ್ ಡೌನ್ ಮಾಡಲು ಸಿದ್ದತೆ ನಡೆದಿದೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳು, ಅಧಿಕಾರಿಗಳ ಹಾಗೂ ಅವರ ಸಂಪರ್ಕಕ್ಕೆ ಒಳಗಾದವರಿಗೆ ತಪಾಸಣೆ ಮಾಡುವ ಸಿದ್ದತೆ ನಡೆದಿದೆ.
ಎಸ್ ಜಿಟಿ ಕಾಲೇಜ್ ಬಂದ್: ನಗರದ ಪ್ರತಿಷ್ಠಿತ ಕಾಲೇಜ್ ಗಳಲ್ಲೊಂದಾದ ಎಸ್.ಜಿ.ಟಿ.ಕಾಲೇಜ್ನಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಸೊಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜ.23ರವರೆಗೆ ಕಾಲೇಜ್ ನ್ನು ಸಂಪೂರ್ಣ ಬಂದ್ ಮಾಡಿ, ಎಲ್ಲರ ತಪಾಸಣೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಎಸ್ ಜಿಟಿ ಕಾಲೇಜು ಜೊತೆಗೆ ನಗರದ ಕಾನೂನು ಮಹಾವಿದ್ಯಾಲಯ, ಬಿಎಡ್ ಕಾಲೇಜ್, ಬಾಲಕಿಯರ ವಸತಿ ಗೃಹ, ಎಂಜಿನೀಯರಿಂಗ್ ಕಾಲೇಜ್ ನ ಹಾಸ್ಟೆಲ್ ಗಳನ್ನು ತಕ್ಷಣದಿಂದ ಬಂದ್ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.