ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಬಹುಚರ್ಚಿತ ಜಾತಿಗಣತಿ ವರದಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಸೇರಿದೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್ ನಾಯ್ಕ್ ಹಾಗೂ ಅಧಿಕಾರಿಗಳು ವರದಿಯನ್ನು ಅಧಿಕೃತವಾಗಿ ಸಿಎಂಗೆ ಸಲ್ಲಿಸಿದರು. ವರದಿ ಸ್ವೀಕಾರದ ವೇಳೆ ಹಲವು ಸಚಿವರು, ಶಾಸಕರು ಮತ್ತು ಆಯೋಗದ ಸದಸ್ಯರು ಉಪಸ್ಥಿತರಿದ್ದರು.
ವರದಿಯಲ್ಲಿ ಪ್ರಮುಖ ಸಮುದಾಯಗಳ ಅಂಕಿ-ಅಂಶ
ಸಲ್ಲಿಕೆಯಾಗಿರುವ ವರದಿಯಲ್ಲಿ ವಿವಿಧ ಸಮುದಾಯಗಳ ಅಂದಾಜು ಜನಸಂಖ್ಯೆಯ ವಿವರ ಉಲ್ಲೇಖಿಸಲಾಗಿದೆ. ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ.14ರಷ್ಟಿದ್ದು, 75 ರಿಂದ 80 ಲಕ್ಷದವರೆಗೆ ಇರಬಹುದು ಎಂದು ಹೇಳಲಾಗಿದೆ. ವೀರಶೈವ ಲಿಂಗಾಯತರು ಶೇ.11, ಒಕ್ಕಲಿಗರು ಶೇ.10 ಹಾಗೂ ಕುರುಬ ಸಮುದಾಯ ಶೇ.8ರಷ್ಟು ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:
ವರದಿ ತಯಾರಿಗೆ ಹಿಡಿದ ಸಮಯ
ಈ ಕುರಿತು ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ಸರ್ವೇ ಕಾರ್ಯ ಮುಗಿದ ಬಳಿಕ ವರದಿಯ ವಿಶ್ಲೇಷಣೆ ಮತ್ತು ಕನ್ನಡ ಅನುವಾದಕ್ಕೆ ಹೆಚ್ಚು ಸಮಯ ತೆಗೆದುಕೊಂಡಿದ್ದೇವೆ ಎಂದರು. ಮೂಲ ವರದಿ ಇಂಗ್ಲಿಷ್ನಲ್ಲಿ ಇದ್ದ ಕಾರಣ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಲಾಗಿದೆ ಎಂದು ಹೇಳಿದರು.
ಮುಂದಿನ ಹಂತ ಏನು?
ಜಾತಿಗಣತಿ ವರದಿ ಸಲ್ಲಿಕೆಗೆ ಆಯೋಗದ ಸದಸ್ಯರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವರದಿ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದರು. ಕ್ಯಾಬಿನೆಟ್ ಒಪ್ಪಿಗೆ ಬಳಿಕ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗಿದೆ.



