ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರವು ನಾಗ್ಪುರದ ಹಲವಾರು ಭಾಗಗಳಲ್ಲಿ ವ್ಯಾಪಕ ಆಸ್ತಿ ಹಾನಿ, ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆಗೆ ಕಾರಣವಾಯಿತು. ಇದರ ಕುರಿತು ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಘರ್ಷಣೆಯ ಸಮಯದಲ್ಲಿ ಗಲಭೆಕೋರರಿಂದ ಉಂಟಾದ ಉಂಟಾದ ಆಸ್ತಿ ಹಾನಿಯ ವೆಚ್ಚವನ್ನು ಸರ್ಕಾರ ಅವರಿಂದಲೇ ಮರುಪಡೆಯುತ್ತದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಫಡ್ನವೀಸ್, ಸಂಭವಿಸಿರುವ ಯಾವುದೇ ಹಾನಿಗೆ ಅದರ ಮೌಲ್ಯವನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು. ಅವರು ಹಣವನ್ನು ಪಾವತಿಸದಿದ್ದರೆ, ಅವರ ಆಸ್ತಿಯನ್ನು ವಸೂಲಿಗಾಗಿ ಮಾರಾಟ ಮಾಡಲಾಗುತ್ತದೆ. ಅಗತ್ಯವಿರುವಲ್ಲೆಲ್ಲಾ ಬುಲ್ಡೋಜರ್ಗಳನ್ನು ಸಹ ಬಳಸಲಾಗುತ್ತದೆ ಎಂದು ಹೇಳಿದರು.
ನಾಗ್ಪುರದಲ್ಲಿ ನಡೆದ ಘಟನೆಯನ್ನು ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲಿಸಿದೆ. ಔರಂಗಜೇಬನ ಸಮಾಧಿಯ ಪ್ರತಿಕೃತಿಯನ್ನು ಬೆಳಿಗ್ಗೆ ಸುಟ್ಟುಹಾಕಲಾಯಿತು. ಅದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಯಿತು, ಆದರೆ ಅದರ ಮೇಲೆ ಕುರಾನ್ನ ಒಂದು ಪದ್ಯವನ್ನು ಬರೆಯಲಾಗಿದ್ದನ್ನೂ ಸುಟ್ಟು ಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ಜನರು ಒಟ್ಟುಗೂಡಿದರು. ಜನಸಮೂಹವು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿತು ಎಂದು ಸಿಎಂ ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಗಲಭೆ ನಡೆಸುತ್ತಿದ್ದವರನ್ನು ಬಂಧಿಸಲಾಗುತ್ತಿದೆ. ಇಲ್ಲಿಯವರೆಗೆ 104 ಜನರನ್ನು ಬಂಧಿಸಲಾಗಿದೆ. ಪೊಲೀಸರು ಹೆಚ್ಚಿನ ಜನರನ್ನು ಬಂಧಿಸಲಿದ್ದಾರೆ ಎಂದು ಸಿಎಂ ಫಡ್ನವೀಸ್ ಹೇಳಿದರು.
ಇದೇ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡುವವರನ್ನು ನಾಗ್ಪುರ ಹಿಂಸಾಚಾರ ಪ್ರಕರಣದಲ್ಲಿ ಸಹ-ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಫಡ್ನವೀಸ್ ಎಚ್ಚರಿಕೆ ನೀಡಿದ್ದಾರೆ.ಇದುವರೆಗೆ 68 ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಗುರುತಿಸಿ ಅಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.