ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರ ನಿರ್ಣಾಯಕ ಹಂತ ತಲುಪಿದ್ದು, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಚಾರದ ವೇಗ ಹೆಚ್ಚಿಸಿವೆ. ಇದರ ಅಂಗವಾಗಿ ಇಂದು ಅಮಿತ್ ಶಾ, ರಾಜನಾಥ್ ಸಿಂಗ್ ತೆಲಂಗಾಣಕ್ಕೆ ಬರುತ್ತಿದ್ದು, ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.
ದೆಹಲಿಯಿಂದ ನೇರವಾಗಿ ಹೈದರಾಬಾದ್ ಬೇಗಂಪೇಟ್ ವಿಮಾನ ನಿಲ್ದಾಣ ತಲುಪಲಿರುವ ಅಮಿತ್ ಶಾ ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ನಿಜಾಮಾಬಾದ್ ಜಿಲ್ಲೆಯ ಆರ್ಮೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜೇಂದ್ರನಗರದ ನಂತರ ಸೆರಿಲಿಂಗಂಪಲ್ಲಿ ಮತ್ತು ಅಂಬರ್ ಪೇಟೆ ಕ್ಷೇತ್ರಗಳಲ್ಲಿ ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಈ ರೋಡ್ಶೋಗಳ ನಂತರ ಅವರು ದೆಹಲಿಗೆ ಹಿಂತಿರುಗುತ್ತಾರೆ. ಒಂದು ದಿನದ ಬಳಿಕ 26, 27 ಮತ್ತು 28 ರಂದು ಮತ್ತೆ ತೆಲಂಗಾಣಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಹೈದರಾಬಾದ್ ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೇಡ್ಚಲದಲ್ಲಿ ಬಿಜೆಪಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಸಂಜೆ ಕಂಟೋನ್ಮೆಂಟ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.