ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನವಾಪಿ ಮಸೀದಿಯ (Gyanvapi Mosque) ಕುರಿತು ಭಾರತೀಯ ಪುರಾತತ್ವ ಸಮೀಕ್ಷೆಯ (ASI) ನೀಡಿದ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ವಾರಣಾಸಿ ನ್ಯಾಯಾಲಯವು (Varanasi court) ಇಂದು (ಜನವರಿ 24 ರಂದು) ತೀರ್ಪು ನೀಡಿದೆ.
ಹಿಂದು ಪರ ವಕೀಲ ವಿಷ್ಣುಶಂಕರ್ ಜೈನ್ ತಮ್ಮ ವಾದ ಮಂಡಿಸಿದ್ದಾರೆ. ಪುರಾತತ್ವ ಇಲಾಖೆ ಸಾರ್ವಜನಿಕಗೊಳಿಸಬೇಕು ಅನ್ನೋದು ಹಿಂದುಗಳ ವಾದವಾಗಿತ್ತು. ಮುಸ್ಲಿಂ ವರ ವಾದವನ್ನೂ ಕೇಳಿಸಿಕೊಂಡ ನ್ಯಾಯಾಲಯ, ಪುರಾತತ್ವ ಇಲಾಖೆ ವರದಿ ಬಹಿರಂಗ ಪಡಿಸಲು ಅನುಮತಿ ನೀಡಿದೆ..
ಕಾಶಿಯಲ್ಲಿ ವಿಶ್ವನಾಥ ಮಂದಿರದ ಮೇಲೆ ಗ್ಯಾನವಾಪಿ ಮಸೀದಿ ನಿರ್ಮಿಸಲಾಗಿದೆಯೇ ಎಂಬುದನ್ನು ಅರಿಯಲು ನಡೆಸಿರುವ ವೈಜ್ಞಾನಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕೇ? ಬೇಡವೇ ಎಂಬುದರ ಕುರಿತ ತನ್ನ ತೀರ್ಪನ್ನು ಸ್ಥಳೀಯ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಜನವರಿ 5 ರಂದು ನೀಡಬೇಕಿದ್ದ ತೀರ್ಪನ್ನು ಜ.24ಕ್ಕೆ ಮುಂದೂಡಿತ್ತು. ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿದ್ದ ಪುರಾತತ್ವ ಇಲಾಖೆ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿತ್ತು. ಜೊತೆಗೆ ವರದಿಯನ್ನು ಕನಿಷ್ಠ ನಾಲ್ಕು ವಾರ ಬಿಡುಗಡೆ ಮಾಡದಂತೆ ವಾರಾಣಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು
ಎಎಸ್ಐ ಡಿಸೆಂಬರ್ 19 ರಂದು ವಾರಣಾಸಿ ನ್ಯಾಯಾಲಯದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ತಾನು ಕೈಗೊಂಡ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿತ್ತು. ವಾರಣಾಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಎಸ್ಐ ಈ ಸಮೀಕ್ಷೆಯನ್ನು ಕೈಗೊಂಡಿತ್ತು.
ವರದಿಯ ವಿಷಯವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವ ಸಂಭಾವ್ಯ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಎಸ್ಐ, ವದಂತಿಗಳ ಹರಡುವಿಕೆ ಮತ್ತು ಇದು ನಡೆಯುತ್ತಿರುವ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿತ್ತು .