ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಸಾವುಗಳ ಕುರಿತಾಗಿ ನೀಡಿದ ಡಾಟಾ ಸರಿಯಾಗಿಲ್ಲ. ಅದು ನಿರಾಧಾರ ವಾಗಿದೆ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಅವರು ಮೂರು ಕಾರಣಗಳನ್ನೂ ನೀಡಿದ್ದಾರೆ.
- ಭಾರತವು ದಶಕಗಳಿಂದ ನಡೆಯುತ್ತಿರುವ ಜನನ ಮತ್ತು ಮರಣ ನೋಂದಣಿಯ ಅತ್ಯಂತ ದೃಢವಾದ ವ್ಯವಸ್ಥೆಯನ್ನು ಹೊಂದಿದೆ. ಇದು ಅತ್ಯಂತ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತದೆ ಮತ್ತು ಈ ಡೇಟಾ ಲಭ್ಯವಿದೆ. ಕೋವಿಡ್ ಸಮಯದಲ್ಲಿ ಉಂಟಾದ ಸಾವುಗಳನ್ನು ಲೆಕ್ಕ ಹಾಕುವಾಗ ಆ ಡೇಟಾವನ್ನು ಬಳಸಬೇಕು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ಡೇಟಾವನ್ನು ಬಳಸಿಲ್ಲ.
- ಡಬ್ಲೂಎಚ್ಒ ತನ್ನ ವರದಿಯಲ್ಲಿ ಮಾಧ್ಯಮ ಅಥವಾ ದೃಢೀಕರಿಸದ ಮೂಲಗಳಿಂದ ಬಂದ ಪುರಾವೆಗಳನ್ನು ಹೆಚ್ಚಾಗಿ ಬಳಸಿದೆ. ದೃಢೀಕೃತ ಡೇಟಾ ಲಭ್ಯವಿದ್ದರೂ ಕೂಡ ಊಹಾತ್ಮಕವಾಗಿ ಅಂಕಿ ಅಂಶಗಳನ್ನು ದಾಖಲು ಮಾಡುವುದು ತಪ್ಪು. ಇದು ಡೇಟಾ ಸಂಗ್ರಹಣೆಯ ವೈಜ್ಞಾನಿಕ ವಿಧಾನವೂ ಅಲ್ಲ ಆದ್ದರಿಂದ ಈ ವರದಿ ಪ್ರಶ್ನಾರ್ಹವಾಗಿದೆ.
- ಕೋವಿಡ್ ನಿಂದ ಸಂಭವಿಸಿದ ಸಾವುಗಳಿಗೆಗೆ ಭಾರತ ಉದಾರವಾಗಿ ಮತ್ತು ಮುಕ್ತವಾಗಿ ಪರಿಹಾರ ಕೊಟ್ಟಿದೆ. ಹಾಗಾಗಿ ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರು ಸರ್ಕಾರದ ಪರಿಹಾರಕ್ಕಾಗಿ ಮುಂದೆ ಬರುತ್ತಿದ್ದರು. ಆ ಸಂದರ್ಭದಲ್ಲಿ ಸಹಜವಾಗಿಯೇ ಎಲ್ಲಾ ಸಾವುಗಳನ್ನು ದಾಖಲಿಸಲಾಗುತ್ತಿತ್ತು.
ಆದ್ದರಿಂದ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ನೈಜ ಸಂಖ್ಯೆಗಿಂತಲೂ ಅಧಿಕ ಸಾವುಗಳನ್ನು ತೋರಿಸಲಾಗಿದೆ. ಇದು ಸಂಪೂರ್ಣವಾಗಿ ರುಜುವಾತು ಪಡಿಸದ ಮಾಹಿತಿಗಳ ಆಧಾರದಲ್ಲಿದೆ. ಯಾವುದೇ ಡೇಟಾವನ್ನು ಪ್ರಸ್ತುತ ಪಡಿಸುವಾಗ ವೈಜ್ಞಾನಿಕವಾಗಿ ಮತ್ತು ಹೆಚ್ಚಿನ ಪುರಾವೆಗಳ ಆಧಾರದ ಮೇಲೆ ಪ್ರಸ್ತುತಪಡಿಸಬೇಕು. ವಿಶ್ವ ಆರೊಗ್ಯ ಸಂಸ್ಥೆ ಈ ಕೆಲಸ ಮಾಡಿಲ್ಲ. ಹಾಗಾಗಿ ಒಂದು ದೇಶವಾಗಿ ನಾವು ಇದನ್ನು ಖಂಡಿಸಲೇಬೇಕಾಗುತ್ತದೆ ಎಂದಿದ್ದಾರೆ.