ಹೊಸದಿಗಂತ ವರದಿ ಮಡಿಕೇರಿ:
ಮಹಿಳೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಹೆರೂರು ಗ್ರಾಮದ ನಿವಾಸಿ ಮಲ್ಲಿಗೆ ಎಂಬಾಕೆಯನ್ನು ಆ.15ರ ರಾತ್ರಿ ಹತ್ಯೆ ಮಾಡಲಾಗಿತ್ತು. ಈಕೆಯ ವಯಸ್ಸು 45 ವರ್ಷ.
ವಿಷಯ ತಿಳಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರರಾಜ್, .ಸೋಮವಾರಪೇಟೆ ಡಿವೈಎಸ್’ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ಪತ್ತೆ ದಳದ ಸಿಬ್ಬಂದಿ ಹಾಗೂ ಆರ್ಎಫ್ಎಸ್ಎಲ್, ಮೈಸೂರು ಘಟಕದ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ, ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು.
ಸಾಕ್ಷ್ಯಾಧಾರ ಹಾಗೂ ದೂರುದಾರರು ನೀಡಿದ ಮಾಹಿತಿ ಅನ್ವಯ ಬುಧವಾರ ಶಂಕಿತ ಆರೋಪಿ ಅದೇ ಗ್ರಾಮದ ನಿವಾಸಿ ಪ್ರಶಾಂತ್ (25) ಎಂಬಾತನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಹತ್ಯೆಗೀಡಾದ ಮಹಿಳೆ ಈ ಹಿಂದೆ ಇಬ್ಬರನ್ನು ವಿವಾಹವಾಗಿದ್ದು, ಇಬ್ಬರೂ ಮೃತಪಟ್ಟಿರೆನ್ನಲಾಗಿದೆ.
ಪ್ರಸಕ್ತ ಆರೋಪಿ ಪ್ರಶಾಂತ್ನೊಂದಿಗೆ ಜೀವನ ನಡೆಸುತ್ತಿದ್ದು, ಮಂಗಳವಾರ ಸಂಜೆ ಆಕೆಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಕಲಹ ಆರಂಭಿಸಿದ ಪ್ರಶಾಂತ್ ಆಕೆಯನ್ನು ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ.