ಹೊಸದಿಗಂತ ವರದಿ ವಿಜಯಪುರ:
ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಜನಸಾಗರ ಹರಿದುಬರುತ್ತಿದೆ. ಇದು ಬಿಜೆಪಿ ಗೆಲುವಿನ ಸಂಕೇತ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಅನೇಕ ಸಣ್ಣ ಸಮುದಾಯಕ್ಕೆ ನ್ಯಾಯ ಒದಗಿಸಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ. ರಾಜ್ಯ ಸರ್ಕಾರ ನೀಡುತ್ತಿರುವ ವಿದ್ಯಾಸಿರಿ ಯೋಜನೆಯಿಂದ ಕೃಷಿಕರ ಮಕ್ಕಳ ಶಿಕ್ಷಣಕ್ಕೆ, ನೇಕಾರ ಸಮ್ಮಾನದಂತ ಯೋಜನೆಗಳು ಆರ್ಥಿಕ ಶಕ್ತಿ ನೀಡುತ್ತಿದೆ ಎಂದರು.
ಪಂಚಮಸಾಲಿ ಸಮುದಾಯವನ್ನು 2ಬಿ ವರ್ಗದಲ್ಲಿ ಸೇರಿಸಿದ್ದೇ ಬಿಜೆಪಿ. ಆ ಸಮುದಾಯದ ಜೊತೆ ಬಿಜೆಪಿ ಸದಾ ಇದ್ದೇ ಇರುತ್ತದೆ. ರಾಜ್ಯದಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಾವೇ ಮಾಡಿದ್ದು ಎಂದು ಹೇಳುವ ಮೂಲಕ ಅಪ್ರಬುದ್ಧತೆಯನ್ನು ತೋರುತ್ತಿರುವ ವಿರೋಧ ಪಕ್ಷ ಕಾಂಗ್ರೆಸ್ ನಾಯಕರಿಗೆ ಸಾಮಾನ್ಯ ಜ್ಞಾನವೇ ಇಲ್ಲ ಎಂದು ಟೀಕಿಸಿದರು.
ಲೊಕಾಯುಕ್ತಕ್ಕೆ ಇದ್ದ ಶಕ್ತಿಯನ್ನು ಕಾಂಗ್ರೆಸ್ಸಿಗರು ಕುಗ್ಗಿಸಿದ್ದರು. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ತಂಡಗಳ ಸಮಾರೋಪ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಜಿ ಬರಲಿದ್ದಾರೆ. ಆ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರಲಿದ್ದಾರೆ ಎಂದರು.
ಯಾತ್ರೆಯ ಸಂಚಾಲಕ ಅರುಣ ಶಾಹಾಪುರ, ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಬಳಿಕ ನಗರದ ಗೋದಾವರಿ ಹೋಟೆಲನಿಂದ ಪ್ರಮುಖ ಮಾರ್ಗಗಳ ಮೂಲಕ ಸಿದ್ಧೇಶ್ವರ ದೇವಸ್ಥಾನ ವರೆಗೆ ವಿಜಯ ಸಂಕಲ್ಪ ಬೃಹತ್ ಯಾತ್ರೆ ನಡೆಯಿತು.
ಈ ಯಾತ್ರೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಶಾಸಕ ರಮೇಶ ಜಾರಕಿಹೊಳಿ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.