ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚಳಿಗಾಲದ ಅಧಿವೇಶನದ ಸಮಯ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ ತಮ್ಮ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಟಿ ರವಿ ಅವರನ್ನು ಬಂಧಿಸಿ ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸ್ ಠಾಣೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಸಿಟಿ ರವಿ ಬಂಧನ ಖಂಡಿಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಸಿಟಿ ರವಿ ಭೇಟಿಗೆ ಅವಕಾಶ ಕೊಡುವಂತೆ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್ ಅವರನ್ನು ಕೂಡ ಠಾಣೆಯ ಒಳಗೆ ಬಿಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಪೊಲೀಸ್ ಠಾಣೆ ಮುಂದಿನ ಗೇಟ್ ತೆಗೆಯುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರೇನು ಕಾಂಗ್ರೆಸ್ ಏಜೆಂಟರಾ ಎಂದು ಕಿಡಿಕಾರಿದರು.
ಕೂಡಲೆ ಸ್ಥಳಕ್ಕೆ ಸಿಟಿ ರವಿ ಪರ ವಕೀಲ ಚೇತನ್ ಮನೇರಿಕರ್ ಆಗಮಿಸಿದ್ದಾರೆ. ಆದ್ರೆ ಪೊಲೀಸರು ಲಾಯರ್ಗೂ ಭೇಟಿ ಮಾಡಲು ಅವಕಾಶ ನಿರಾಕರಿಸಿದ್ದಾರೆ. ಲಾಯರ್ ಅನ್ನು ಗೇಟ್ ಹೊರಗೆ ನಿಲ್ಲಿಸಿದ್ದಾರೆ. ಈ ವೇಳೆ ಕೋಪಗೊಂಡ ವಕೀಲರು, ಸುಪ್ರೀಂಕೋರ್ಟ್ ಗೈಡ್ಲೈನ್ಸ್ ಇದೆ, ಆರೋಪಿಯನ್ನು ಲಾಯರ್ ಭೇಟಿ ಮಾಡಬಹುದು, ಕಾನೂನು ಉಲ್ಲಂಘನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.