July 14, 2026
Tuesday, July 14, 2026
spot_img

ಕಪ್ ಖುಷಿ ಕೈಮೀರಿತು: ಕರ್ನೂಲ್‌ನಲ್ಲಿ ಸಂಭ್ರಮಾಚರಣೆ ನಡುವೆ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಫೈನಲ್‌ನಲ್ಲಿ ಆರ್‌ಸಿಬಿ ಸತತ ಎರಡನೇ ಬಾರಿ ಚಾಂಪಿಯನ್ ಆಗುತ್ತಿದ್ದಂತೆಯೇ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದರು. ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್‌ನಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗದಿದ್ದರೂ, ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭ್ರಮಾಚರಣೆ ಗೊಂದಲಕ್ಕೆ ಕಾರಣವಾಯಿತು.

ರಸ್ತೆ ತಡೆದು ಘೋಷಣೆ; ವಾಹನ ಸವಾರರಿಗೆ ಸಂಕಷ್ಟ

ನಗರದ ಪ್ರಮುಖ ಭಾಗಗಳಲ್ಲಿ ನೂರಾರು ಅಭಿಮಾನಿಗಳು ತಂಡದ ಗೆಲುವನ್ನು ಆಚರಿಸಲು ಮಧ್ಯರಾತ್ರಿ ರಸ್ತೆಗಿಳಿದರು. ಬ್ಯಾನರ್‌ಗಳು, ಘೋಷಣೆಗಳು ಹಾಗೂ ಮೆರವಣಿಗೆಯ ನಡುವೆ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆ ತಡೆದು ಸಂಭ್ರಮಿಸಿದ ಪರಿಣಾಮ ಸಾರ್ವಜನಿಕರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸಿದರು.

ಇದನ್ನೂ ಓದಿ:

ಖಾಸಗಿ ಬಸ್ ಮೇಲೆ ಕಲ್ಲು ತೂರಾಟ, ಗಾಜು ಪುಡಿ

ಸಂಭ್ರಮಾಚರಣೆ ನಡುವೆ ಪರಿಸ್ಥಿತಿ ಹದಗೆಟ್ಟಿದ್ದು, ಕೆಲವು ದುಷ್ಕರ್ಮಿಗಳು ರಸ್ತೆಬದಿಯಲ್ಲಿ ನಿಂತಿದ್ದ ಖಾಸಗಿ ಬಸ್ ಮೇಲೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ದಾಳಿಯಿಂದ ಬಸ್‌ನ ಹಲವು ಕಿಟಕಿಗಳ ಗಾಜುಗಳು ಜಖಂಗೊಂಡಿವೆ. ಬಸ್‌ನೊಳಗಿದ್ದ ಪ್ರಯಾಣಿಕರು ಹಠಾತ್ ಘಟನೆಗೆ ಬೆಚ್ಚಿಬಿದ್ದಿದ್ದಾರೆ.

ಪೊಲೀಸರ ತ್ವರಿತ ಕ್ರಮ; ಪರಿಸ್ಥಿತಿ ನಿಯಂತ್ರಣಕ್ಕೆ

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ಬಳಿಕ ಕಾನೂನು ಸುವ್ಯವಸ್ಥೆ ಪುನಃಸ್ಥಾಪನೆಯಾಯಿತು. ಘಟನೆ ಕುರಿತು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !