ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಕೈಕೊಟ್ಟ ಮುಂಗಾರು ಮಳೆ, ವಿದ್ಯುತ್ ಕ್ಷೇತ್ರದ ಮೇಲೆ ಭಾರಿ ಹೊಡೆತ ನೀಡಿದ್ದು, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ.21.25 ರಷ್ಟು ನೀರು ಮಾತ್ರ ಉಳಿದಿದೆ ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ ಶೇ.47.22 ರಷ್ಟು ನೀರು ಇತ್ತು. ಆದರೆ ಈ ಬಾರಿ ಮುಂಗಾರು ದುರ್ಬಲವಾಗಿರುವುದರಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಜೂನ್ ತಿಂಗಳಲ್ಲಿ ನಿರೀಕ್ಷಿಸಿದ್ದ ಮಳೆ ಇನ್ನೂ ರಾಜ್ಯದ ಬಹುತೇಕ ಭಾಗಗಳಿಗೆ ತಲುಪಿಲ್ಲ. ಇದರ ನಡುವೆ, ಹಿಂದಿನ ವಿದ್ಯುತ್ ವಿನಿಮಯ ಒಪ್ಪಂದಗಳ ಪ್ರಕಾರ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಇತರ ರಾಜ್ಯಗಳಿಂದ ಪಡೆದ ವಿದ್ಯುತ್ ಅನ್ನು ಈಗ ಹಿಂತಿರುಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಅಣೆಕಟ್ಟುಗಳಲ್ಲಿ ನೀರು ಕಡಿಮೆ ಇದ್ದರೂ ಅದರಿಂದ ಉತ್ಪಾದಿಸುವ ವಿದ್ಯುತ್ನ ಒಂದು ಭಾಗವನ್ನು ಇತರ ರಾಜ್ಯಗಳಿಗೆ ನೀಡಲೇಬೇಕಾಗಿದೆ.
ಇದನ್ನೂ ಓದಿ:
ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ಅಂತರ ಕಂಡುಬಂದಿದ್ದು, ರಾತ್ರಿ 9.30ರಿಂದ 10 ಗಂಟೆವರೆಗೆ 130 ಮೆಗಾವ್ಯಾಟ್ ಕೊರತೆ, ಬೆಳಿಗ್ಗೆ 10ರಿಂದ 11 ಗಂಟೆವರೆಗೆ 430 ಮೆಗಾವ್ಯಾಟ್ ಕೊರತೆ, ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ 400 ಮೆಗಾವ್ಯಾಟ್ ಕೊರತೆ, ಮಧ್ಯಾಹ್ನ 12ರಿಂದ 1 ಗಂಟೆವರೆಗೆ 230 ಮೆಗಾವ್ಯಾಟ್ ಕೊರತೆ ಕಂಡುಬಂದಿದೆ. ಈ ಅಂಕಿಅಂಶಗಳು ವಿದ್ಯುತ್ ವ್ಯವಸ್ಥೆಯ ಮೇಲಿನ ಒತ್ತಡವನ್ನು ಸ್ಪಷ್ಟವಾಗಿ ತೋರಿಸುತ್ತಿವೆ.
ಜೂನ್ 30 ನಿರ್ಣಾಯಕ ದಿನ!
ಜೂನ್ ಅಂತ್ಯದೊಳಗೆ ಮಳೆ ಚುರುಕುಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಮಳೆ ಇಲ್ಲದಿದ್ದರೆ ವಿದ್ಯುತ್ ಬಳಕೆ ಹೆಚ್ಚಾಗುವುದು ಸಹಜವಾದ್ದರಿಂದ ಮುಂದಿನ ತಿಂಗಳುಗಳಲ್ಲಿ ಲೋಡ್ಶೆಡ್ಡಿಂಗ್ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.



