ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ರಾಜಕೀಯ ಅಂಗಳದಲ್ಲಿ ನಟ ವಿಜಯ್ ಅವರ ಪ್ರವೇಶ ಹೊಸ ಚರ್ಚೆಗೆ ಕಾರಣವಾಗಿದೆ. ಮೊದಲ ಚುನಾವಣೆಯಲ್ಲೇ ಗಮನಾರ್ಹ ಪ್ರದರ್ಶನ ನೀಡಿರುವ ಟಿವಿಕೆ ಪಕ್ಷ, ರಾಜ್ಯ ರಾಜಕೀಯದ ಲೆಕ್ಕಾಚಾರವನ್ನೇ ಬದಲಿಸುವ ಮಟ್ಟಿಗೆ ಮುನ್ನಡೆ ಸಾಧಿಸಿದೆ. ಸಿನಿ ಲೋಕದ ಜನಪ್ರಿಯತೆಯನ್ನು ರಾಜಕೀಯ ವೇದಿಕೆಗೆ ಯಶಸ್ವಿಯಾಗಿ ತಂದಿರುವ ವಿಜಯ್, ಯುವ ಮತದಾರರ ಮನಸ್ಸು ಗೆಲ್ಲುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ವಿಜಯ್ ಘೋಷಿಸಿದ್ದ ಜನಪರ ಯೋಜನೆಗಳು ಸಾಕಷ್ಟು ಗಮನ ಸೆಳೆದಿದ್ದವು. ಮಹಿಳೆಯರಿಗೆ ಮಾಸಿಕ 2,500 ರೂ. ಸಹಾಯಧನ, ಸಣ್ಣ ರೈತರ ಬೆಳೆ ಸಾಲಮನ್ನಾ, ವೃದ್ಧರು, ವಿಧವೆಯರು & ಅಂಗವಿಕಲರಿಗೆ 3,000 ರೂ. ಮಾಸಿಕ ಭತ್ಯೆ, ಸಹೋದರಿ, ಮಗಳ ಮದುವೆಗೆ 8 ಗ್ರಾಂ ಚಿನ್ನ, 200 ಯೂನಿಟ್ ಉಚಿತ ವಿದ್ಯುತ್, ಕೊಳವೆ ನೀರು ಸರಬರಾಜು, ಪ್ರತಿ ವರ್ಷ 6 ಉಚಿತ ಎಲ್ಪಿಜಿ ಸಿಲಿಂಡರ್ ಭರವಸೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ, 5 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ, ಪದವೀಧರರಿಗೆ 4,000 ರೂ. ಭತ್ಯೆ, ಡಿಪ್ಲೋಮಾ ಪಡೆದವರಿಗೆ 2,500 ರೂ. ಭತ್ಯೆ ಘೋಷಣೆಯೂ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:
ಇದೀಗ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ, ಸರ್ಕಾರ ರಚನೆಗೆ ರಾಜಕೀಯ ಸಮೀಕರಣಗಳು ಚುರುಕುಗೊಂಡಿವೆ. ಮೈತ್ರಿ ಸರ್ಕಾರದ ಸಾಧ್ಯತೆಗಳ ಮಾತು ಕೇಳಿಬರುತ್ತಿದ್ದರೂ, ವಿಜಯ್ ನಾಯಕತ್ವದ ಬಗ್ಗೆ ಬೆಂಬಲಿಗರಲ್ಲಿ ವಿಶ್ವಾಸ ಹೆಚ್ಚಾಗಿದೆ. ಆದರೆ ಚುನಾವಣಾ ವೇದಿಕೆಯಲ್ಲಿ ನೀಡಿದ ಭರವಸೆಗಳನ್ನು ಯಾವಾಗ ಮತ್ತು ಹೇಗೆ ಜಾರಿಗೆ ತರುತ್ತಾರೆ ಎಂಬುದರತ್ತ ಈಗ ರಾಜ್ಯದ ಜನರ ಗಮನ ನೆಟ್ಟಿದೆ.



