ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕೇರಳದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ನಡೆಸಿದ್ದ ಹರತಾಳದ ವೇಳೆ ಉಂಟಾದ ಸಾರ್ವಜನಿಕ ಆಸ್ತಿ-ಪಾಸ್ತಿಯ ಹಾನಿಯ ನಷ್ಟ ವಸೂಲಿ ಮಾಡುವಲ್ಲಿ ಸರಕಾರ ವಿಳಂಬವಾಗಿರುವುದಕ್ಕೆ ಹೈಕೋರ್ಟ್ ಬಳಿ ಕ್ಷಮೆ ಕೋರಿದೆ.
ಹರತಾಳದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಯ ಹಾನಿಯಾಗಿದ್ದು, ಈ ಕಾರಣ ಭಾಗಿಯಾದವರ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಆಸ್ತಿಗಳನ್ನು ಗುರುತಿಸಿ ಜನವರಿ 15ರ ಒಳಗಾಗಿ ವಶಪಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ಬೇಕು ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಹರತಾಳದ ಹಿಂಸಾಚಾರದ ವೇಳೆ ರಾಜ್ಯ ಸಾರಿಗೆ ಸಂಸ್ಥೆಗೆ ಆದ ಹಾನಿಗೆ ಸಂಬಂಧಿಸಿ 5.2 ಕೋಟಿ ರೂ. ಠೇವಣಿ ಇಡುವಂತೆ ಈ ಹಿಂದೆ ಪಿಎಫ್ಐ ಸಂಘಟನೆಯ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ಗೆ ಹೈಕೋರ್ಟ್ ಸೂಚಿಸಿತ್ತು. ನಷ್ಟಕ್ಕೆ ಪಿಎಫ್ಐಯನ್ನೇ ಪ್ರಮುಖ ಹೊಣೆಯನ್ನಾಗಿ ಮಾಡಬೇಕು ಎಂದು ಸರ್ಕಾರಕ್ಕೆ ತಿಳಿಸಿತ್ತು.
ಆದ್ರೆ ನಷ್ಟ ವಸೂಲಾತಿ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಕಳೆದ ವಾರ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಜತೆಗೆ, ಜನವರಿಯ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಈ ಬಗ್ಗೆ ರಾಜ್ಯ ಸರಕಾರ ತಮ್ಮ ಕಡೆಯಿಂದ ಉದ್ದೇಶಪೂರ್ವಕ ವಿಳಂಬ ಆಗಿಲ್ಲ. ವಸೂಲಾತಿ ಪ್ರಕ್ರಿಯೆಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಭೂ ಕಂದಾಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸೆಪ್ಟೆಂಬರ್ನಲ್ಲಿ ರಾಜ್ಯವ್ಯಾಪಿ ಹರತಾಳದ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಂದ 86 ಲಕ್ಷ ರೂ. ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ ಎಂದು ಸರ್ಕಾರವು ನವೆಂಬರ್ 7ರಂದು ಹೈಕೋರ್ಟ್ಗೆ ತಿಳಿಸಿತ್ತು. ಖಾಸಗಿ ಕ್ಷೇತ್ರದವರಿಗೆ 16 ಲಕ್ಷ ರೂ. ನಷ್ಟವಾಗಿರುವುದಾಗಿಯೂ ತಿಳಿಸಿತ್ತು. ಈವರೆಗೆ ರಾಜ್ಯ ಪೊಲೀಸರು 361 ಪ್ರಕರಣಗಳನ್ನು ದಾಖಲಿಸಿದ್ದು, 2,674 ಜನರನ್ನು ಬಂಧಿಸಿತ್ತು.