ಹೊಸದಿಗಂತ ವರದಿ ದಾವಣಗೆರೆ:
ಸರ ಕಳವು ಪ್ರಕರಣದಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಿರುವ ದಾವಣಗೆರೆ ಪೊಲೀಸರು, ಬಂಧಿತರಿಂದ 5.30 ಲಕ್ಷ ರೂ. ಮೌಲ್ಯದ ಬಂಗಾರದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಸುನೀಲ್ ನಾಯ್ಕ @ ರಾಖಾ(26 ವರ್ಷ), ದಿನೇಶ ನಾಯ್ಕ@ ಧನು(24 ವರ್ಷ), ಸುನೀಲ್ ನಾಯ್ಕ(32 ವರ್ಷ) ಬಂಧಿತ ಆರೋಪಿಗಳು. ಇವರು ಕಳ್ಳತನ ಮಾಡಿದ್ದ 45 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದು, ಸದ್ಯ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:
ಕಳೆದ ಆ.18ರಂದು ಜಿಲ್ಲೆಯ ಚನ್ನಗಿರಿ ತಾಲೂಕು ಹಿರೇವುಡಾ ಗ್ರಾಮದ ಲತಾ ಎಂಬುವರು ಅಕಳೀಕಟ್ಟೆ ಗ್ರಾಮದಿಂದ ಸ್ವಗ್ರಾಮಕ್ಕೆ ಬೈಕಿನಲ್ಲಿ ಹೋಗುತ್ತಿರುವಾಗ ಬೈಕಿನಲ್ಲಿ ಹಿಂಬಾಲಿಸಿದ ಮೂವರು ಪಿರ್ಯಾದಿ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗಾಗಿ ಎಸ್ಪಿ ಡಾ.ಹೆಚ್.ಟಿ.ಶೇಖರ್, ಎಎಸ್ಪಿ ಪರಮೇಶ್ವರ ಹೆಗಡೆ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಎನ್.ರವೀಶ್ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಲಾಗಿತ್ತು. ತಂಡವು ಆರೋಪಿಗಳನ್ನು ಬಂಧಿಸಿ, ಸ್ವತ್ತು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.



