ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಾಣಂತಿಯರ ಮರಣ ಮೃದಂಗ ಮುಂದುವರೆದಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು ಗರ್ಭದಲ್ಲೇ ಮೃತಪಟ್ಟರೆ, ಚಿಕಿತ್ಸೆ ಫಲಿಸದೆ ಬೆಳಗಾವಿ ಮೂಲದ 8 ತಿಂಗಳ ಗರ್ಭಿಣಿ ಇಂದು ಸಾವನ್ನಪ್ಪಿದ್ದಾರೆ. ಈ ನಡುವೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಆಡೂರ್ ಗ್ರಾಮದ ನಿವಾಸಿ ರೇಣುಕಾ ಪ್ರಕಾಶ್ ಹಿರೇಮನಿ ಹೆರಿಗೆಗಾಗಿ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ನಿನ್ನೆ ಕುಷ್ಟಗಿ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ರೇಣುಕಾಗೆ ಮುಂಜಾನೆ 2:30ರ ಸುಮಾರಿಗೆ ಹೆರಿಗೆ ಆಗಿತ್ತು. ಆದರೆ ಡೆಲಿವರಿಗೂ ಮೊದಲೇ ಮಗು ಮೃತಪಟ್ಟಿದ್ದು, ಸಿಜೇರಿಯನ್ ಮಾಡಿ ವೈದ್ಯರು ಮಗುವನ್ನು ಹೊರ ತೆಗೆದಿದ್ದಾರೆ. ಈ ಸಮಯದಲ್ಲಿ ಹೈಬಿಪಿ ಮತ್ತು ಹೃದಯಾಘಾತದಿಂದ ರೇಣುಕಾ ಸಾವನ್ನಪ್ಪಿದ್ದಾರೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ, ಇತ್ತೀಚೆಗೆ ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಾಗಿದೆ ಅನ್ನೊ ಆರೋಪ ಕೇಳಿಬಂದಿತ್ತು.
ಇನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳಪೆ IV ದ್ರಾವಣದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಐವರ ಬಾಣಂತಿಯರ ಸರಣಿ ಸಾವಾಗಿತ್ತು. ಈ ಪ್ರಕರಣ ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿತ್ತು. ಈ ಪ್ರಕರಣ ಮಾಸುವ ಮುನ್ನವೇ ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವಾಗಿದೆ.
ಬಳ್ಳಾರಿ, ಬೆಳಗಾವಿ ಬೆನ್ನಲ್ಲೇ ಇತ್ತೀಚೆಗೆ ಬೆಂಗಳೂರಿನಲ್ಲೂ ಇಬ್ಬರು ಬಾಣಂತಿಯರು ಉಸಿರು ನಿಲ್ಲಿಸಿರೋದು ಆತಂಕಕ್ಕೆ ಕಾರಣವಾಗಿತ್ತು. ಅದರಲ್ಲೂ ಮಗುವಿಗೆ ಜನ್ಮ ನೀಡಿದ್ದ ಮರುದಿನವೇ ಬಾಣಂತಿ ಉಸಿರು ನಿಲ್ಲಿಸಿರೋದು ಆಕ್ರೋಶ ಹಾಗೂ ಆಕ್ರಂದನಕ್ಕೆ ಕಾರಣವಾಗಿತ್ತು