ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಚರ್ಚಿತ ಗ್ಯಾನವಾಪಿ ಮಸೀದಿಯ ಸರ್ವೇ ಕಾರ್ಯವು ಪೂರ್ಣಗೊಂಡಿದ್ದು ಇಂದು ವರದಿ ಸಲ್ಲಿಕೆಯಾಗಬೇಕಿತ್ತು. ಆದರೆ ಸರ್ವೇ ಕೈಗೊಂಡ ನ್ಯಾಯಾಲಯ ಸಮಿತಿಯ ಸದಸ್ಯರಾದ ಕಮಿಷನರ್ ಅಜಯ್ ಸಿಂಗ್ ಇಂದು ವರದಿಯನ್ನು ಸಲ್ಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು “ಮೂರು ದಿನಗಳ ಸಮೀಕ್ಷೆಯು ಎಲ್ಲಾ ಅಂಶಗಳನ್ನು ಪರಿಶೋಧಿಸಿದೆ. ಸಮೀಕ್ಷಾ ವರದಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ, ಕೆಲವು ಅನಿರೀಕ್ಷಿತ ಕಾರಣಗಳಿಂದ ವರದಿಯನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು (ಮಂಗಳವಾರ) ಸಲ್ಲಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
“ಸಮೀಕ್ಷೆಯ ಸಮಯದಲ್ಲಿ ಅನೇಕ ಛಾಯಾ ಚಿತ್ರಗಳು ಹಾಗೂ ಸುದೀರ್ಘವಾದ ವಿಡಿಯೋ ತುಣುಕುಗಳನ್ನು ಸಂಗ್ರಹಿಸಲಾಗಿದೆ. ವರದಿ ಸಲ್ಲಿಸಲು ನ್ಯಾಯಾಲಯದ ಬಳಿ ಇನ್ನೊಂದು ದಿನಾಂಕವನ್ನು ಕೋರುತ್ತೇವೆ” ಎಂದು ಹೇಳಿದ್ದಾರೆ.
ಇದರ ನಡುವೆ ಮಸೀದಿಯ ವಿಡಿಯೋಗ್ರಫಿ ಮಾಡುವ ಕುರಿತು ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು ಇಂದು ಆ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಮೂಲಗಳು ವರದಿ ಮಾಡಿವೆ.