ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 10 ದಿನಗಳ ಕಸ್ಟಡಿಗೆ ಕೋರಿದೆ.
ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ನ್ಯಾಯಾಲಯ ಆವರಣ ಹಾಗೂ ಸುತ್ತಮುತ್ತ ಬಿಗಿ ಭದ್ರತೆ ನಡುವೆ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಎಎಪಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲಾಯಿತು.
ಪಂಜಾಬ್ ಚುನಾವಣೆಗಾಗಿ ‘ಸೌತ್ ಗ್ರೂಪ್’ನ ಕೆಲವು ಆರೋಪಿಗಳಿಂದ ದೆಹಲಿ ಮುಖ್ಯಮಂತ್ರಿ 100 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತು. ದೆಹಲಿ ಅಬಕಾರಿ ನೀತಿ ರಚನೆ, ಅನುಷ್ಠಾನಕ್ಕಾಗಿ ಕೇಜ್ರಿವಾಲ್ ಸೌತ್ ಗ್ರೂಪ್’ನಿಂದ ಕೋಟ್ಯಂತರ ರೂ. ಕಿಕ್ ಬ್ಯಾಕ್ ಪಡೆದಿದ್ದು, ಮದ್ಯ ಹಗರಣದಲ್ಲಿ ಎಎಪಿ ಇತರ ಸಚಿವರು, ಮುಖಂಡರೊಂದಿಗೆ ಕೇಜ್ರಿವಾಲ್ ಪ್ರಮುಖ ಕಿಂಗ್ಪಿನ್ ಎಂದು ಇಡಿ ಹೇಳಿದೆ.
ಇಡಿ ಪರವಾಗಿ ಎಎಸ್ಜಿ ಎಸ್ವಿ ರಾಜು ವಾದ ಮಂಡಿಸಿದರೆ, ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದಾರೆ.