ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಎಲ್ಜಿ (ಲೆಫ್ಟಿನೆಂಟ್ ಗವರ್ನರ್) ಶಾಕ್ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದಿಂದ 97 ಕೋಟಿ ರೂ. ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದು, ಮಂಗಳವಾರ ಈ ಕುರಿತು ಆದೇಶಗಳನ್ನು ಕಳುಹಿಸಲಾಗಿದೆ.
ಸರ್ಕಾರದ ಘೋಷಣೆಗಳ ಹೆಸರಿನಲ್ಲಿ ದೆಹಲಿ ಸರ್ಕಾರವು ರಾಜಕೀಯ ಜಾಹೀರಾತುಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ 2015 ರ ಸುಪ್ರೀಂ ಕೋರ್ಟ್ ಆದೇಶ, 2016 ದೆಹಲಿ ಹೈಕೋರ್ಟ್ ಆದೇಶ ಮತ್ತು 2016 CCRGA ಆದೇಶದ ಅನ್ವಯ ಲೆಫ್ಟಿನೆಂಟ್ ಗವರ್ನರ್ ಈ ಸೂಚನೆ ನೀಡಿದ್ದಾರೆ. ಎಎಪಿ ಸರಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.
ದೆಹಲಿ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ನಡುವಿನ ಶೀತಲ ಸಮರ ಮುಂದುವರೆದಿದೆ. ಅವಕಾಶ ಸಿಕ್ಕಾಗಲೆಲ್ಲ ಎಲ್ಜಿ ಕೇಜ್ರಿವಾಲ್ ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿದಿದ್ದಾರೆ. 2015ರಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಆದಾಗಿನಿಂದ ಎಎಪಿ ನಡೆಸುವ ಯೋಜನೆಗಳನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು. ಸರ್ಕಾರದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಕ್ಷದ ಪ್ರಚಾರಕ್ಕೆ ಬಳಸಿಕೊಂಡಿದೆ ಎಂಬ ಆರೋಪ ಇದೀಗ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ 2016ರ ಸೆಪ್ಟೆಂಬರ್ನಿಂದ ಬಂದಿರುವ ಎಲ್ಲ ಪ್ರಕಟಣೆಗಳನ್ನು ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ಸಿಸಿಆರ್ಜಿಎಗೆ ಕಳುಹಿಸುವಂತೆ ಎಲ್ಜಿ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. 97 ಕೋಟಿ ರೂ. ಪಾವತಿಗೆ ಲೆಫ್ಟ್ನೆಂಟ್ ಗವರ್ನರ್ 15 ದಿನಗಳ ಕಾಲಾವಕಾಶ ನೀಡಿದೆ.