ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೆಹಲಿಯ ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ ಅನ್ನು ಅಮೃತ್ ಗಾರ್ಡನ್ ಆಗಿ ಬದಲಾವಣೆ ಮಾಡಿದ ಬೆನ್ನಲ್ಲೇ ಇದೀಗ ದಿಲ್ಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ನಲ್ಲಿರುವ ಮೊಘಲ್ ಗಾರ್ಡನ್ ಅನ್ನು ‘ಗೌತಮ್ ಬುದ್ಧ ಶತಮಾನೋತ್ಸವ’ ಗಾರ್ಡನ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಜನವರಿ 27 ರಂದೇ ಉದ್ಯಾನವನಕ್ಕೆ ಗೌತಮ ಬುದ್ಧನ ಹೆಸರನ್ನು ಇಡಲಾಗಿದೆ. ಈ ಉದ್ಯಾನವನವು ಯಾವುದೇ ರೀತಿಯಲ್ಲಿ ಮೊಘಲ್ ವಿನ್ಯಾಸವನ್ನು ಹೊಂದಿಲ್ಲ. ಆ ಕಾರಣಕ್ಕಾಗಿ ಈ ಹೆಸರನ್ನು ಬದಲಾಯಿಸಿದ್ದಾಗಿ ವಿಶ್ವವಿದ್ಯಾಲಯ ತಿಳಿಸಿದೆ.
ಶನಿವಾರ ರಾಷ್ಟ್ರಪತಿ ಭವನವೂ ಮೊಘಲ್ ಗಾರ್ಡನ್ಸ್ನ ಹೆಸರನ್ನು ‘ಅಮೃತ್ ಉದ್ಯಾನ್’ ಎಂದು ಬದಲಾವಣೆ ಮಾಡಿ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು.
ದಿಲ್ಲಿ ವಿಶ್ವವಿದ್ಯಾನಿಲಯದ ಸಕ್ಷಮ ಪ್ರಾಧಿಕಾರವು ಗಾರ್ಡನ್ನ ಹೆಸರನ್ನು (ವೈಸ್ ರೀಗಲ್ ಲಾಡ್ಜ್ ಎದುರು) ಗೌತಮ ಬುದ್ಧನ ಪ್ರತಿಮೆಯನ್ನು ಅದರ ಮಧ್ಯದಲ್ಲಿ ಹೊಂದಿರುವ ಕಾರಣಕ್ಕೆ ಗೌತಮ್ ಬುದ್ಧ ಸೆಂಟಿನರಿ ಗಾರ್ಡನ್ ಎಂದು ಅನುಮೋದಿಸಿದೆ’ ಎಂದು ರಿಜಿಸ್ಟ್ರಾರ್ ವಿಕಾಸ್ ಗುಪ್ತಾ ಜನವರಿ 27 ರ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಗೌತಮ ಬುದ್ಧನ ಪ್ರತಿಮೆಯು ಉದ್ಯಾನದಲ್ಲಿ ಕನಿಷ್ಠ 15 ವರ್ಷಗಳಿಂದ ನಿಂತಿದೆ. ಈ ಉದ್ಯಾನವನ್ನು ಮೊಘಲರು ನಿರ್ಮಿಸಿಲ್ಲ ಅಥವಾ ಮೊಘಲ್ ಉದ್ಯಾನ ವಿನ್ಯಾಸವನ್ನು ಹೊಂದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.