ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆರೋಪವಿದ್ದು, ಈ ಹಿನ್ನೆಲೆ ಸ್ಪಷ್ಟನೆ ನೀಡುವಂತೆ ನೋಟಿಸ್ ನೀಡಲಾಗಿದೆ.
ಬಿಜೆಪಿಯ ನಿಶಿಕಾಂತ್ ದುಬೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್ ಸಂಸದರಿಂದ ವಿಶೇಷ ಹಕ್ಕು ಉಲ್ಲಂಘನೆ ಆರೋಪದ ಮೇಲೆ ಲೋಕಸಭೆ ಸೆಕ್ರೆಟರಿಯೇಟ್ ಗೆ ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಸಂಬಂಧ ಸ್ಪಷ್ಟನೆ ನೀಡುವಂತೆ ಲೋಕಸಭೆ ಸೆಕ್ರೆಟರಿಯೇಟ್ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರು ಬುಧವಾರದೊಳಗೆ ಈ ಸಂಬಂಧ ಪ್ರತಿಕ್ರಿಯಿಸಬೇಕು ಎಂದು ಲೋಕಸಭೆ ಸಚಿವಾಲಯ ತಿಳಿಸಿದೆ.
ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸುವಾಗ, ಉದ್ಯಮಿ ಗೌತಮ್ ಅದಾನಿ ಅವರೊಂದಿಗಿನ ಸಂಬಂಧವನ್ನು ಪ್ರಶ್ನಿಸಿದ್ದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದಾನಿ ಅವರ ಅದೃಷ್ಟದಲ್ಲಿ ಉಲ್ಕಾಪಾತದ ಏರಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ಕ್ರೋನಿ ಕ್ಯಾಪಿಟಲಿಸಂ ಎಂದು ಆರೋಪಿಸಿದ್ದರು. ಅಲ್ಲದೆ ಮೋದಿ ಜೊತೆಗಿನ ಸ್ನೇಹದಿಂದಾಗಿಯೇ ಅದಾನಿ ಸಂಪತ್ತು ಗಣನೀಯವಾಗಿ ಏರಿಕೆಯಾಗಿದೆ. ಪ್ರಧಾನಿ ಮೋದಿ ತಮ್ಮ ಅಧಿಕಾರದ ದುರ್ಬಳಕೆ ಮಾಡಿ ಅದಾನಿಗೆ ನೆರವಾಗಿದ್ದಾರೆ ಎಂಬರ್ಥದಲ್ಲಿ ಗಂಭೀರ ಆರೋಪ ಮಾಡಿದ್ದರು.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ, ಅವರ ಹೇಳಿಕೆಗಳು ಅವಹೇಳನಕಾರಿ, ಅಸಂಸದೀಯ ಮತ್ತು ದಾರಿತಪ್ಪಿಸುವಂತಿವೆ ಎಂದು ಆರೋಪಿಸಿದೆ. ಇದೇ ವಿಚಾರವಾಗಿ ಬಿಜೆಪಿಯ ನಿಶಿಕಾಂತ್ ದುಬೆ ಅವರು ರಾಹುಲ್ ಗಾಂಧಿ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್ ನೀಡಿದ್ದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಲೋಕಸಭೆಯ ಸ್ಪೀಕರ್ಗೆ ಪತ್ರ ಬರೆದು ನಿಯಮ 380 ರ ಅಡಿಯಲ್ಲಿ ರಾಹುಲ್ ಗಾಂಧಿಯವರ ಅಸಂಸದೀಯ, ಅಪ್ರಾಮಾಣಿಕ ಆರೋಪಗಳನ್ನುಸದನದ ಕಲಾಪದಿಂದ ತೆಗೆದುಹಾಕಬೇಕು ಎಂದು ಹೇಳಿದ್ದಾರೆ.