ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಪಾಡಿಗೆ ನಾವು ಕುಳಿತಿದ್ವಿ, ಮೊಬೈಲ್ನಲ್ಲಿ ಏಕಾಏಕಿ ದೊಡ್ಡ ಬೀಪ್ ಸೌಂಡ್ ಆಯ್ತು, ಫೋನ್ ವೈಬ್ರೇಟ್ ಕೂಡ ಆಯ್ತು, ಯಾವುದೋ ಮೆಸೇಜ್ ಕಾಣಿಸ್ತು, ಅದಕ್ಕೆ ಒಕೆ ಮಾಡಬೇಕಾ ಬೇಡ್ವಾ? ಒಕೆ ಮಾಡಿದ್ರೆ ಬ್ಯಾಂಕ್ ಅಕೌಂಟ್ನಲ್ಲಿ ಇರೋ ಹಣ ಹೋಗಿಬಿಡುತ್ತಾ? ಈ ಅನುಭವ ನಿಮಗೂ ಆಯ್ತಾ?
ಹೆದರಬೇಡಿ, ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ಎಮರ್ಜೆನ್ಸಿ ಅಲರ್ಟ್ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದು, ನಮ್ಮ ರಾಜ್ಯದಲ್ಲಿ ಇಂದು ಪ್ರಯೋಗ ನಡೆದಿದೆ. ಆ ಪ್ರಯೋಗದಿಂದಲೇ ನಿಮ್ಮೆಲ್ಲರಿಗೂ ಅಲರ್ಟ್ ಮೆಸೇಜ್ ಬಂದಿದೆ.
ಭೂಕಂಪ, ಪ್ರವಾಹ ಹೀಗೆ ಅನೇಕ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದಾಗಿ ಎಮರ್ಜೆನ್ಸಿ ಅಲರ್ಟ್ ಸೇವೆಯನ್ನು ದೂರ ಸಂಪರ್ಕ ಇಲಾಖೆ ಪರಿಚಯಿಸಿದೆ. ಇದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಕೈಜೋಡಿಸಿದೆ.
ಈಗ ಅಲರ್ಟ್ ಬಂದಿರುವುದರ ಅರ್ಥ ಯಾವುದೋ ಎಮರ್ಜೆನ್ಸಿ ಇದೆ ಎಂದಲ್ಲ, ಎಮರ್ಜೆನ್ಸಿ ಸಂದರ್ಭಗಳಲ್ಲಿ ಅಲರ್ಟ್ ಮೆಸೇಜ್ ಹೇಗೆ ಎಲ್ಲರಿಗೂ ರೀಚ್ ಆಗುತ್ತದೆ ಎಂದು ಪರೀಕ್ಷಿಸಲಾಗಿದೆ.