ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ರೈಲ್ವೆ ನಿದಾಣ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನೆಲ ಅಗೆಯುತ್ತಿರುವ ವೇಳೆ ಭೂಗತವಾಗಿದ್ದ ಪುರಾತನ ನೆಲಮಾಳಿಗೆ ಕಟ್ಟಡವೊಂದು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.
ಇನ್ನಷ್ಟು ಅಚ್ಚರಿಯೆಂದರೆ ಈ ಕಟ್ಟಡ ಗಟ್ಟಿಮುಟ್ಟಾಗಿದ್ದು, ಒಳ ಭಾಗದಲ್ಲಿ ಗಾರೆ ಕೂಡಾ ಹಾಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಹಶೀಲ್ದಾರ್ ವಿಜಯ್ ಕುಮಾರ್, ನಗರಸಭೆ ಪೌರಾಯುಕ್ತ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್, ಇದು ಸುಮಾರು ೧೦೦ ವರ್ಷದ ಹಳೇ ಕಟ್ಟಡದ ರೀತಿ ಗೋಚರಿಸುತ್ತಿದ್ದು, ಇನ್ನಷ್ಟು ಮಾಹಿತಿ ಸಂಗ್ರಹಿಸಲು ಮೈಸೂರಿನಲ್ಲಿರುವ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು. ಬಳಿಕ ಇನ್ನಷ್ಟು ಮಾಹಿತಿ ಸಿಗಲಿದೆ ಎಂದಿದ್ದಾರೆ.
ಇಲ್ಲಿ ಕುದುರೆ ಕಟ್ಟುತ್ತಿದ್ದರು, ನೀರಿನ ಪೂರೈಕೆಗೆ ಟ್ಯಾಂಕ್ ಇತ್ತು ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಸ್ಥಳದ ಮಾಲೀಕರು ತಿಳಿಸಿದ್ದಾರೆ.
ಮತ್ತೊಂದು ಮದ್ದಿನ ಮನೆ?
ಇಷ್ಟಕ್ಕೂ ಈ ಕಟ್ಟಡ ಏನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಕಟ್ಟಡ ರಚನೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ಮದ್ದಿನ ಮನೆಯ ಮಾದರಿಯಲ್ಲಿದ್ದು, ಜೊತೆಗೆ ಈ ಭಾಗದಲ್ಲಿ ಟಿಪ್ಪು ಅಳ್ವಿಕೆಯ ಕುರುಹುಗಳೂ ಇರುವುದರಿಂದ ಮತ್ತೊಂದು ಮದ್ದಿನ ಮನೆಯಾಗಿರಬಹುದು ಎಂಬ ಶಂಕೆ ಮೂಡಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ