ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆಯಷ್ಟೇ ತಾತನ ಪೋಸ್ಟ್ಗೆ ಬಡ್ತಿ ಹೊಂದಿದ್ದಾರೆ. ಈ ನಡುವೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ಒಂದನ್ನು ಮಾಡಿದ್ದು, ಜನರಿಗೆ ಅದು ವಿಶೇಷವಾಗಿ ಕಾಣಿಸಿದೆ.
ಸಾಮಾನ್ಯವಾಗಿ ತೇಜಸ್ವಿ ಸೂರ್ಯ ಹಾಗೂ ಡಿಕೆ. ಶಿವಕುಮಾರ್ ಮಧ್ಯೆ ರಾಜಕೀಯ ಜಟಾಪಟಿ ನಡೆಯುತ್ತಲೇ ಇರುತ್ತದೆ. ಆದರೆ ರಾಜ್ಯದ ಅಭಿವೃದ್ಧಿ ಎನ್ನುವ ವಿಷಯ ಬಂದಾಗ ಎಲ್ಲರೂ ಒಗ್ಗಟಿನಿಂದ ಇರುತ್ತಾರೆ.
ನಿನ್ನೆಯಷ್ಟೇ ತೇಜಸ್ವಿ ಸೂರ್ಯ ಹಾಗೂ ಡಿಕೆಶಿ ಕಾರ್ಯಕ್ರಮವೊಂದಕ್ಕೆ ಒಟ್ಟಾಗಿ ತೆರಳಿದ್ದರು. ಕಾರ್ನಲ್ಲಿ ನಡೆದ ಸನ್ನಿವೇಶವೊಂದನ್ನು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಡಿಸಿಎಂ ಜೊತೆ ಇಂದು ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಕಾರ್ನಲ್ಲಿ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಫೋನ್ ಮೇಲೆ ಫೋನ್ ಬರುತ್ತಿತ್ತು. ಆಗ ಯಾಕೆ ಸರ್ ಏನು ವಿಶೇಷ ಎಂದು ಕೇಳಿದೆ. ಅದಕ್ಕೆ ಅವರು ಇವತ್ತು ಮಗಳಿಗೆ ಡೆಲಿವರಿ, ನನಗೆ ಮೊಮ್ಮಗು ಬರಲಿದೆ ಎಂದು ನಗುತ್ತಾ ಹೇಳಿದರು.
ಒಂದು ಕಡೆ ತಾನು ಇರಲೇಬೇಕಾದ ಕ್ಷಣ ಮತ್ತೊಂದು ಕಡೆ ಒಪ್ಪಿಕೊಂಡ ಸಾರ್ವಜನಿಕ ಜವಾಬ್ದಾರಿ. ಫ್ಲೈ ಓವರ್ ಉದ್ಘಾಟನೆ, ಸ್ಕೈ ವಾಕ್ ಶಂಕುಸ್ಥಾಪನೆ ಮುಗಿಸಿಯೇ ಅವರು ಆಸ್ಪತ್ರೆಯತ್ತ ಹೊರಟರು.
ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಎಲ್ಲರೂ ಮೊದಲು ತ್ಯಾಗ ಮಾಡಬೇಕಾದ್ದು ಖಾಸಗಿ ಜೀವನ! ಈ ಮಾತು ಇಂದು ನಿಜ ಎನಿಸುತ್ತಿದೆ. ತಾತನಾದ ಡಿಕೆಶಿ ಅವರಿಗೆ ಅಭಿನಂದನೆಗಳು. ಐಶ್ವರ್ಯಾ ಹಾಗೂ ಮಗುವಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಪೋಸ್ಟ್ ಮಾಡಿದ್ದಾರೆ.



