ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ರಸ್ತೆಯಲ್ಲಿ ಹೋಗುವವರು ಮಾತನಾಡಿದ್ದಕ್ಕೆಲ್ಲಾ ನಾನು ಉತ್ತರ ನೀಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಿಜಾಬ್ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿಗಳು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರಾಜ್ಯದ ಆಡಳಿತ ನಡೆಸುತ್ತಿದ್ದಾರೆ. ಅವರ ಪಕ್ಷದವರು ಏನು ಹೇಳಿದ್ದಾರೆ? ದೇಶದ ಸಂವಿಧಾನದಂತೆ ಅವರು ಆಡಳಿತ ನಡೆಸುತ್ತಿದ್ದಾರಾ? ಅಥವಾ ಅವರ ಪಕ್ಷದವರು ಹೇಳಿದಂತೆ ಆಡಳಿತ ಮಾಡುತ್ತಿದ್ದಾರಾ ಎಂದು ಅವರೇ ಹೇಳಬೇಕು. ಮುಖ್ಯಮಂತ್ರಿಗಳು ಅವರಿಗೆ ಉತ್ತರ ನೀಡಬೇಕು ಎಂದರು.
ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗದವರ ಸಭೆ ನಡೆಸಲಾಯಿತು. ಅವರ ಕ್ಷೇತ್ರಗಳಲ್ಲಿ ಹೇಗೆ ಶಕ್ತಿ ನೀಡಬೇಕು ಎಂಬ ಬಗ್ಗೆ ಚರ್ಚೆ ಮಾಡಲು ಎಐಸಿಸಿಯಿಂದ ಒಂದು ತಂಡ ಆಗಮಿಸಿದ್ದು, ಈ ಸಭೆ ನಡೆಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರುವುದಾಗಿ ಸಿ.ಎಂ ಇಬ್ರಾಹಿಂ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ, ನಾನು ಪಕ್ಷದ ಸಂಘಟನೆ ವಿಚಾರದಲ್ಲಿ ಮಗ್ನನಾಗಿದ್ದು, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.