ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುವುದಕ್ಕೆ ಬಿಡಬೇಡಿ ಎಂದು ಕಾಶ್ಮೀರಿ ಮುಸ್ಲಿಮರಿಗೆ ಖಲಿಸ್ತಾನಿ ಪ್ರತ್ಯೇಕತಾವಾದಿ (Khalistani Separatist) ಮತ್ತು ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದುಶೃಂಗಸಭೆ ನಡೆಯಲಿದೆ. ಈ ವೇಳೆ ಕಣಿವೆಯಲ್ಲಿ ನೆಲೆಸಿರುವ ಕಾಶ್ಮೀರಿ ಮುಸ್ಲಿಮರು ದೆಹಲಿಗೆ ಹೋಗಿ ಜಿ20 ಶೃಂಗಸಭೆಗೆ ಅಡ್ಡಿಪಡಿಸಿ ಎಂದು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ನಂತರ ಶೃಂಗಸಭೆ ನಡೆಯುವ ಪ್ರಗತಿ ಮೈದಾನಕ್ಕೆ ಮೆರವಣಿಗೆ ನಡೆಸುವಂತೆ ಕರೆ ನೀಡಿದ್ದು, ಜೊತೆಗೆ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಧ್ವಜ ಹಾರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
2 ದಿನಗಳ ಶೃಂಗಸಭೆಯಲ್ಲಿ 20 ಸದಸ್ಯ ರಾಷ್ಟ್ರಗಳು ಸೇರಿದಂತೆ 40 ದೇಶಗಳ ನಾಯಕರು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಜಾಗತಿಕ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಪ್ರತಿಕೂಲ ಘಟನೆಗಳನ್ನು ತಪ್ಪಿಸಲು, ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್ಎಸ್ಜಿ) ಬಾಂಬ್ ಸ್ಕ್ವಾಡ್ ಸಹಿತ ಎಲ್ಲೆಡೆ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.