ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಡಾ.ರಾಜ್ಕುಮಾರ್ ಅವರ ಸಮಾಧಿ ಜಾಗದ ವಿಚಾರದಲ್ಲಿ ಶುರುವಾದ ಮಾತಿನ ಸಮರ ತಾರಕಕ್ಕೇರಿದ್ದು, ಇದೀಗ ನಟ ಚೇತನ್ ಅಹಿಂಸಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಟ ಚೇತನ್ ಅಹಿಂಸಾ ಅವರು ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಣ್ಣಾವ್ರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿತ್ತು.
ಈ ಬೆನ್ನಲ್ಲೇ ಚೇತನ್ ವಿರುದ್ಧ ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರಮುಖರು ತೀವ್ರವಾಗಿ ಕಿಡಿಕಾರಿದ್ದರು. ಹಿರಿಯ ನಿರ್ಮಾಪಕ ಸಾರಾ ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷೆ, ನಟಿ ಜಯಮಾಲ ಮತ್ತು ಅನೇಕರು ಚೇತನ್ ಹೇಳಿಕೆಯನ್ನು ಖಂಡಿಸಿದ್ದರು. ಚೇತನ್ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು.
ಇಲ್ಲಿಗೆ ಸುಮ್ಮನೆಯಾಗದ ಚೇತನ್, ನಿರ್ಮಾಪಕ ಸಾರಾ ಗೋವಿಂದು ವಿರುದ್ಧವೇ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನನ್ವಯ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದರು.
ಇದೀಗ ಸಾರಾ ಗೋವಿಂದು ಕೂಡ ನಟ ಚೇತನ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.



