ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಮಳೆ, ಭೂಕುಸಿತ, ಭೂಕಂಪನಕ್ಕೆ ಕೊಡಗು-ದಕ್ಷಿಣ ಗಡಿ ಭಾಗ ನಲುಗಿಹೋಗಿದ್ದು, ಯಾವಾಗ ಎಲ್ಲಿ ಏನಾಗುತ್ತದೋ ಎಂಬ ಆತಂಕದಲ್ಲಿಯೇ ದಿನಕಳೆಯುತ್ತಿದ್ದಾರೆ. ನಿದ್ದೆಯಿಲ್ಲದ ರಾತ್ರಿಗಳನ್ನು ಕಾಣುತ್ತಿರುವ ಭಾಗಮಂಡಲ ಸಹಿತ ಸುತ್ತಮುತ್ತಲಿನ ಐದು ಗ್ರಾಮದ ಜನತೆ ಈಗ ಹೊಸ ಯೋಜನೆ ಹಾಕಿಕೊಂಡಿದ್ದು, ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಯು ಸರದಿಯಲ್ಲಿ ರಾತ್ರಿಯಲ್ಲಿ ಎಚ್ಚರವಾಗಿರುತ್ತಾರೆ. ಭೂಕಂಪನದ ಕುರಿತು ಇತರರಿಗೆ ಎಚ್ಚರಿಕೆ ನೀಡುತ್ತಾರೆ.
ಮಳೆ ಮುಂದುವರಿದಿರುವಂತೆಯೇ ಗಡಿ ಭಾಗವಾದ ಕರಿಕೆ, ಸಂಪಾಜೆ, ಪೆರಾಜೆ, ಚೆಂಬು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕವೂ ಹೆಚ್ಚುತ್ತಿದೆ. ಶನಿವಾರ ಒಂದೇ ದಿನ ಚೆಂಬು ಪರಿಸರದಲ್ಲಿ ಎರಡು ಬಾರಿ ಮತ್ತೆ ಭೂಮಿ ನಡುಗಿದೆ. ಆಡಳಿತಗಳು ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಿದ್ದರೂ, ಇಲ್ಲಿನ ಜನತೆಯ ಕ್ಷಣ ಕ್ಷಣದ ಆತಂಕ ಮಾತ್ರ ಹೆಚ್ಚುತ್ತಲೇ ಇದೆ.