ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಿರುಸು ಪಡೆದುಕೊಂಡಿದ್ದು ಈಗಾಗಲೇ ಬಿಜೆಪಿ-ಬಂಡಾಯ ಶಿವಸೇನೆ ಮೈತ್ರಿಕೂಟದ ಮುಖ್ಯಮಂತ್ರಿ ಏಕನಾಥಹ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಇಂದು 11ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ನಾಲ್ಕು ದಿನಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ನೂತನ ಮೈತ್ರಿ ಸರ್ಕಾರವು ಎರಡು ದಿನಗಳ ಅಧಿವೇಶನದಲ್ಲಿ ನಾಳೆ ನಾಳೆ ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದೆ.
ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ನಿಷ್ಠ ರಾಜನ್ ಸಾಲ್ವಿ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಬಂಡಾಯ ಮೈತ್ರಿಕೂಟದ ಅಭ್ಯರ್ಥಿಯಾಗಿ ಮೊದಲಬಾರಿಗೆ ಬಿಜೆಪಿ ಶಾಸಕರಾಗಿರುವ ರಾಹುಲ್ ನಾರ್ವೇಕರ್ ಕಣಕ್ಕಿಳಿದಿದ್ದಾರೆ. ಈ ಕುರಿತು ಆರು ಅಂಶಗಳ ಅಪ್ಡೇಟ್ ಇಲ್ಲಿದೆ.
- ಶಿಂಧೆ ಅವರನ್ನು ಬೆಂಬಲಿಸುವ ಬಂಡಾಯ ಶಿವಸೇನೆ ಶಾಸಕರು ಶನಿವಾರ ಸಂಜೆ ಗೋವಾದಿಂದ ಮುಂಬೈಗೆ ಮರಳಿದ್ದು ವಿಧಾನ ಭವನಕ್ಕೆ ಹತ್ತಿರವಾದ ದಕ್ಷಿಣ ಮುಂಬೈನ ಐಷಾರಾಮಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.ಮುಂಬೈನಲ್ಲಿ, ರಾಜ್ಯದ ಕೆಲವು ಭಾಗಗಳಲ್ಲಿ ಬಂಡಾಯ ಶಾಸಕರ ವಿರುದ್ಧ ಶಿವಸೇನೆ ಕಾರ್ಯಕರ್ತರು ಇತ್ತೀಚೆಗೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಎರಡು ದಿನಗಳ ವಿಶೇಷ ಅಧಿವೇಶನ ನಡೆಸಿದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆ ಕುರಿತು ನಿರ್ಧಾರವಾಗಲಿದೆ.
- ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ವಿರುದ್ಧ ಅವಿಶ್ವಾಸ ಗೊತ್ತುವಳಿ ಬಾಕಿ ಇದ್ದರೂ ಉಪಸಭಾಪತಿ ನರಹರಿ ಜಿರ್ವಾಲ್ ಅವರು ಸ್ಪೀಕರ್ನ ಕರ್ತವ್ಯವನ್ನು ನಿರ್ವಹಿಸಬಹುದು ಎಂದು ಹೇಳಿದ್ದಾರೆ.
- 288 ಸದಸ್ಯರ ಸದನದಲ್ಲಿ ಶಿಂಧೆ ಅವರಿಗೆ ಸಣ್ಣ ಪಕ್ಷಗಳ 10 ಶಾಸಕರು ಮತ್ತು ಸ್ವತಂತ್ರರು ಮತ್ತು ಬಿಜೆಪಿಯ 106 ಶಾಸಕರ ಬೆಂಬಲವಿದೆ.
- ಕಳೆದ ತಿಂಗಳು ಶಿವಸೇನೆ ಶಾಸಕ ರಮೇಶ್ ಲಟ್ಕೆ ನಿಧನದಿಂದ ಸದನದಲ್ಲಿ ಒಂದು ಸ್ಥಾನ ಖಾಲಿ ಇದೆ. ಇಬ್ಬರು ಎನ್ಸಿಪಿ ಸದಸ್ಯರಾದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಛಗನ್ ಭುಜಬಲ್ ಗೆ ಕೋವಿಡ್ -19 ಪಾಸಿಟಿವ್ ಪತ್ತೆಯಾಗಿದೆ ಹಾಗೂ ಪಕ್ಷದ ಇತರ ಇಬ್ಬರು ಶಾಸಕರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಅಕ್ರಮ ಹಣವರ್ಗಾವಣೆ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿದ್ದಾರೆ.
- ವಿಧಾನಸಭೆಯಲ್ಲಿ ಪಕ್ಷಗಳ ಸಂಖ್ಯಾಬಲ ಹೀಗಿದೆ : ಶಿವಸೇನೆ 55, ಎನ್ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106, ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ ಪಕ್ಷ 2, ಎಐಎಂಐಎಂ 2, ಪ್ರಹಾರ್ ಜನಶಕ್ತಿ ಪಕ್ಷ 2, ಎಂಎನ್ಎಸ್ 1, ಸಿಪಿಐ (ಎಂ) 1, ಪಿಡಬ್ಲ್ಯೂಪಿ 1, ಸ್ವಾಭಿಮಾನಿ ಪಕ್ಷ 1, ರಾಷ್ಟ್ರೀಯ ಸಮಾಜ ಪಕ್ಷ 1, ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1, ಮತ್ತು ಸ್ವತಂತ್ರರು 13.
- ಏತನ್ಮಧ್ಯೆ, ಮಹಾರಾಷ್ಟ್ರದ ಬಂಡಾಯ ಶಾಸಕರು ತಂಗಿದ್ದ ಹೋಟೆಲ್ನಲ್ಲಿ ಸುಳ್ಳು ಗುರುತು ಮತ್ತು ತಪಾಸಣೆ ನಡೆಸಿದ ಆರೋಪದ ಮೇಲೆ ಪುರುಷ ಮತ್ತು ಮಹಿಳೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.